ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ಸತ್ಯಸಾಯಿ ಜಿಲ್ಲೆಯ ಹಿಂದೂಪುರಂ ಕ್ಷೇತ್ರದ ವೈಸಿಪಿ ಮುಖಂಡ ಚೌಳೂರು ರಾಮಕೃಷ್ಣ ರೆಡ್ಡಿ (46)ಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಶನಿವಾರ ರಾತ್ರಿ ಕರ್ನಾಟಕ ಗಡಿಭಾಗದಲ್ಲಿ ನಡೆಸುತ್ತಿದ್ದ ಡಾವಾ ಕ್ಲೋಸ್ ಮಾಡಿ ಕಾರಿನಲ್ಲಿ ಮನೆಗೆ ಬಂದಿದ್ದರು. ಕಾರಿನಿಂದ ಇಳಿಯುತ್ತಿದ್ದಂತೆ, ರಾಮಕೃಷ್ಣ ರೆಡ್ಡಿ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಮಕೃಷ್ಣ ರೆಡ್ಡಿಯನ್ನು ಸ್ಥಳೀಯರು ಕಾರಿನಲ್ಲಿ ಹಿಂದೂಪುರಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ರಾಮಕೃಷ್ಣ ರೆಡ್ಡಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ರಾಮಕೃಷ್ಣ ರೆಡ್ಡಿ ನಿಧನದಿಂದ ಹಿಂದೂಪುರಂ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹಿಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈಸಿಪಿ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ, ರಾಮಕೃಷ್ಣ ರೆಡ್ಡಿ ಅವರ ಮೃತದೇಹದೊಂದಿಗೆ ಅಂಬೇಡ್ಕರ್ ವೃತ್ತದ ಬಳಿ ಬೆಂಬಲಿಗರು ಹಾಗೂ ವೈಸಿಪಿ ಕಾರ್ಯಕರ್ತರು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಪಕ್ಷದ ಮುಖಂಡರ ಪರಿಸ್ಥಿತಿಯೇ ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು” ಎಂದು ಪ್ರಶ್ನಿಸಿದರು. ಕೂಡಲೇ ಕೊಲೆಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ರಾಮಕೃಷ್ಣ ರೆಡ್ಡಿ ಅವರ ತಾಯಿ ದೂರಿನ ಮೇರೆಗೆ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಎಂಎಲ್ಸಿ ಇಕ್ಬಾಲ್ ಪಿಎ ಗೋಪಿಕೃಷ್ಣ, ರವಿ, ವರುಣ್, ಮುರಳಿ, ನಾಗಣ್ಣ ಸೇರಿದ್ದಾರೆ. ಚೌಳೂರು ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.