ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಂವಿಧಾನ ಅಂಗೀಕರಿಸಿಕೊಂಡು 75 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ನವೆಂಬರ್ 26ರಂದು ಅಂದರೆ ನಾಳೆ ನಡೆಯುವ ಸಂವಿಧಾನ ದಿನಾಚರಣೆಗೆ ರಾಜ್ಯಾದ್ಯಂತ ತಯಾರಿ ಜೋರಾಗಿದೆ.
ಸಂವಿಧಾನ ಮೌಲ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸರ್ಕಾರ ವಿಶೇಷ ಆದೇಶ ಹೊರಡಿಸಿದೆ.
ಬೆಳಗ್ಗೆ 11 ಗಂಟೆಗೆ ಎಲ್ಲ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆ ಓದುವಿಕೆ ಕಡ್ಡಾಯವಾಗಿದ್ದು, ಶಿಕ್ಷಣ ಇಲಾಖೆ ಶಾಲೆಗಳು ಮತ್ತು ಕಾಲೇಜುಗಳಲ್ಲಿ “ಸಂವಿಧಾನ ಜಾಗೃತಿ ಜಾಥಾ” ಜೊತೆಗೆ ಭಾಷಣ, ಚರ್ಚೆ ಮತ್ತು ಪ್ರಶ್ನೋತ್ತರ ಸ್ಪರ್ಧೆಗಳನ್ನು ರೂಪಿಸಿದೆ. ಯುವ ಪೀಳಿಗೆಗೆ ಸಂವಿಧಾನದ ಮಹತ್ವವನ್ನು ಪರಿಚಯಿಸುವುದು ಈ ವರ್ಷದ ವಿಶೇಷ ಗುರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಪೀಠಿಕೆ ಓದಲು ಚಾಲನೆ ನೀಡಲಿದ್ದಾರೆ. ಸಂವಿಧಾನ ರಚನೆಗೆ ಕಾರಣರಾದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಈ ದಿನ, ರಾಜ್ಯದ ಶಾಲೆ-ಕಾಲೇಜುಗಳಿಂದ ಗ್ರಾಮ ಪಂಚಾಯಿತಿ ಮಟ್ಟದವರೆಗೂ ಸಾವಿರಾರು ಕಾರ್ಯಕ್ರಮಗಳ ಮೂಲಕ ಸಂವಿಧಾನ ಮೌಲ್ಯಗಳ ಪ್ರಸಾರ ನಡೆಯಲಿದೆ.

