ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ಭಾರತದ ಸಾಂಸ್ಕೃತಿಕ ಕೇಂದ್ರ. ಅಯೋಧ್ಯೆ ವಿಕಸಿತ ಭಾರತದ ಪ್ರಭಾರಿಯಾಗಲಿದೆ. ಪ್ರಾಚೀನತೆ ಜೊತೆಗೆ ಆಧುನಿಕತೆಯ ಸಂಗಮ ಅಯೋಧ್ಯೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್ ಇದೆ. ಅಯೋಧ್ಯೆಯನ್ನು ಜಾಗತಿಕವಾಗಿ ಸಂಪರ್ಕಿಸಲಾಗುತ್ತಿದೆ. ಅಯೋಧ್ಯೆ ಯುಪಿಯ ಅಗ್ರ ನಗರಗಳಲ್ಲಿ ಒಂದಾಗಿ ಬೆಳೆಯುತ್ತಿದೆ, ಸಾಕಷ್ಟು ಅಭಿವೃದ್ಧಿಯಾಗಿದೆ. ಕಳೆದ 11 ವರ್ಷದಲ್ಲಿ ವಿಶ್ವದ 5ನೇ ಬಲಿಷ್ಠವಾಗಿದೆ, ಶೀಘ್ರದಲ್ಲಿ ಮೂರನೇ ಬಲಿಷ್ಠ ಆರ್ಥಿಕತೆಯಾಗಲಿದೆ ಎಂದು ನುಡಿದರು.
ಈ ಧ್ವಜ ದೂರದಿಂದಲೇ ರಾಮ ಮಂದಿರದ ದರ್ಶನ ಮಾಡಿಸುತ್ತದೆ. ರಾಮ ಮಂದಿರಾ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ವಿಕಸಿತ ಭಾರತ ನಮ್ಮ ಸಂಕಲ್ಪವಾಗಿದೆ. ಒಂದೇ ಸ್ಥಳದಲ್ಲಿ ವಾಲ್ಮೀಕಿ, ಅಹಲ್ಯ ಸೇರಿ ಎಲ್ಲ ಪ್ರಮುಖರಿದ್ದಾರೆ. ರಾಮ ಮಂದಿರಕ್ಕೆ ಬರುವವರು ಆವರಣದಲ್ಲಿರುವ ಏಳು ಮಂದಿರಕ್ಕೆ ಭೇಟಿ ನೀಡಿ ಅವರ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ರಾಮನಿಂದ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.
ವರ್ತಮಾನದ ಬಗ್ಗೆ ಯೋಚಿಸುವವರು ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಿದಂತೆ. ನಾವು ಭವಿಷ್ಯದ ಪೀಳಿಗೆ ಬಗ್ಗೆ ಯೋಚಿಸಬೇಕು. ನಾವು ದೂರದೃಷ್ಟಿಯೊಂದಿಗೆ ಕೆಲಸ ಮಾಡಬೇಕು. ಅದಕ್ಕಾಗಿ ನಾವು ಶ್ರೀರಾಮನ ವ್ಯಕ್ತಿತ್ವದಿಂದ ಕಲಿಯಬೇಕು. ರಾಮ ಅಂದರೆ ಆದರ್ಶ, ರಾಮ ಅಂದರೆ ಪುರುಷೋತ್ತಮ. ರಾಮ ಅಂದರೆ ಧರ್ಮದ ದಾರಿಯಲ್ಲಿ ನಡೆಯುವವ, ಕ್ಷಮೆಯ ಗುಣ, ಜ್ಞಾನ ವಿವೇಕ, ಕೃತಜ್ಞತೆ, ಸೌಮ್ಯ ಸ್ವಭಾವದ ಧೃಡತೆ, ರಾಮ ಅಂದರೆ ಸತ್ಯದ ಬುನಾದಿ, ನಿಷ್ಕಲ್ಮಶ ಮನಸ್ಸು. ರಾಮ ಓರ್ವ ವ್ಯಕ್ತಿಯಲ್ಲ ಅವರೊಂದು ಮೌಲ್ಯ, ಅವರೊಂದು ದಿಕ್ಕು ಎಂದು ಅಭಿಪ್ರಾಯಪಟ್ಟರು.
ಭರತ ತನ್ನ ಸೇನೆ ಜೊತೆಗೆ ಚಿತ್ರಕೂಟ ತಲುಪಿದಾಗ ಲಕ್ಷ್ಮಣ ದೂರದಿಂದಲೇ ಅಯೋಧ್ಯೆ ಸೇನೆಯನ್ನು ಕಂಡು ಹಿಡಿದರು. ವಾಲ್ಮೀಕಿಯವರು ಇದನ್ನು ಉಲ್ಲೇಖಿಸಿದ್ದಾರೆ. ಅದೇ ರೀತಿ ಧ್ವಜ ದೂರದಿಂದಲೇ ಅಯೋಧ್ಯೆಯನ್ನು ಸಂಕೇತಿಸುತ್ತದೆ. ಭಾರತ ಪ್ರಜಾಪ್ರಭುತ್ವದ ಮೂಲವಾಗಿದೆ. ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದ ಉಲ್ಲೇಖ ಇದೆ. ಬಸವಣ್ಣನ ಅನುಭವ ಮಂಟಪ ಇನ್ನೊಂದು ಉದಾಹರಣೆ. ಸಾಮಾಜಿಕ, ಆರ್ಥಿಕ ಎಲ್ಲ ಆಯಾಮದ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಇದು ಬರೀ ಧ್ವಜ ಡಿಸೈನ್ ಬದಲಾವಣೆ ಅಲ್ಲ, ಈ ಧ್ವಜ ಗುಲಾಮಿ ಮನಸ್ಥಿತಿ ತೆಗೆದುಹಾಕಿರುವುದನ್ನು ತೋರಿಸುತ್ತದೆ. ಭಾರತ ಮೆಕಾಲೆ ಮನಸ್ಥಿತಿಯಿಂದ ಹೊರಬಂದಿದೆ ಎಂದರು.

