ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಸಿನಿಮಾದ ಬಗ್ಗೆ ಹೊಸ ವಿವಾದ ಹುಟ್ಟು ಹಾಕಿದ ನಟ ಚೇತನ್ ವಿರುದ್ದ ಕಾಂತಾರ ಸಿನಿಮಾ ತಂಡ ಗರಂ ಆಗಿದ್ದು, ತುಳುನಾಡಿನ ಪ್ರತೀ ಹಿಂದೂಗಳ ಮನೆಯಲ್ಲೂ ದೈವಾರಾಧನೆ ನಡೆಯುತ್ತೆ. ಮೊದಲು ನಾವು ದೈವವನ್ನ ನಂಬೋದು, ಆ ಮೇಲೆ ದೇವರನ್ನ ಎಂದು ಕಾಂತಾರ ಬರಹಗಾರ ಹಾಗೂ ಸಿನಿಮಾದ ‘ಬುಲ್ಲಾ’ ಪಾತ್ರಧಾರಿ ಶನಿಲ್ ಗುರು ಪ್ರತಿಕ್ರಿಯೆ ನೀಡಿದ್ದಾರೆ.
ಯಾವುದೇ ಸಿನಿಮಾ ಯಶಸ್ವಿಯಾದಾಗ ಮಾತನಾಡೋರು ಇದ್ದೇ ಇರ್ತಾರೆ, ಅವರಲ್ಲಿ ಚೇತನ್ ಕೂಡ ಒಬ್ಬರು ಅಷ್ಟೇ. ಅವರನ್ನು ನಾವು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಭೂತಾರಾಧನೆ , ನಾಗಾರಾಧನೆ ಏನು ಅಂತ ಈ ಮಣ್ಣಲ್ಲಿ ಇರೋ ನಮಗೆ ಗೊತ್ತು. ಸಿನಿಮಾದ ಭಾಗವಾಗಿ ಅಲ್ಲದೇ ದೈವದ ಆರಾಧಕನಾಗಿ ನಾನು ಹೇಳ್ತಾ ಇದೀನಿ. ದೈವಕ್ಕೆ ಹಿಂದೆ ಮುಂದೆ ಹೇಳಿದವರು ಅನುಭವಿಸಿದ ಉದಾಹರಣೆ ಇದೆ. ನಮ್ಮ ಭಾವನೆ ಬಗ್ಗೆ ಮಾತನಾಡಿದ್ದಾರೆ, ಇದರ ಬಗ್ಗೆ ಬೇಸರವಿದೆ. ಸಿನಿಮಾ ಜಾಗತಿಕವಾಗಿ ಹಿಟ್ ಆಗುವಾಗ ಈ ರೀತಿ ಮಾತನಾಡ್ತಿದಾರೆ. ಅವರು ಹೇಳಿರೋದಕ್ಕೆ ಅವರಿಗೆ ಪ್ರತಿಫಲ ಸಿಕ್ಕೇ ಸಿಗುತ್ತೆ. ಇದು ಸಿನಿಮಾದ ಬಗ್ಗೆ ಅಪಸ್ವರ, ಇದು ದೈವದ ಬಗ್ಗೆ ಅಲ್ಲ. ಸಿನಿಮಾದ ಬಗ್ಗೆ ಮಾತನಾಡಿ ಅವರು ಪ್ರಚಾರ ತೆಗೋತಿದಾರೆ ಎಂದು ಹೇಳಿದರು.
ದೈವದ ಪ್ರೇರಣೆಯಿಂದಲೇ ಈ ಸಿನಿಮಾ ಆಗಿದೆ. ಜನರು ಸ್ವೀಕರಿಸಿ ನಮ್ಮನ್ನ ಒಪ್ಪಿ ಗೆಲ್ಲಿಸಿದ್ದಾರೆ. ಈ ವಿವಾದ ಅವರು ಅವರ ಮೇಲೆಯೇ ಎಳೆದು ಕೊಂಡಿದ್ದಾರೆ. ನಾವು ನಂಬೋದನ್ನ ಅವರು ಇಲ್ಲ ಅಂತ ಹೇಳಿ ಅದರ ಪರಿಣಾಮ ಎದುರಿಸ್ತಾರೆ ಎಂದರು.
ನಾವು ಈ ಸಿನಿಮಾ ಮಾಡುವಾಗ ಅನೇಕರ ಜೊತೆ ಮಾತನಾಡಿದ್ದೇವೆ. ಶುದ್ದಾಚಾರ ಪಾಲಿಸಿ ಯಾವುದಕ್ಕೂ ಕಳಂಕ ತರದೇ ಸಿನಿಮಾ ಮಾಡಿದ್ದೇವೆ. ಯಾರದ್ದೇ ಭಾವನೆ, ಭಕ್ತಿ, ಆಚಾರ-ವಿಚಾರಕ್ಕೆ ನಾವು ಧಕ್ಕೆ ತಂದಿಲ್ಲ ಎಂದರು.