ಹೊಸದಿಗಂತ ವರದಿ, ಕೊಪ್ಪಳ:
ತಾಲೂಕಿನ ಗಿಣಿಗೇರಿ ಕೆರೆಯಂಗಳದಲ್ಲಿ ಬುಧವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಒಂದುವರೆ ದಶಕಗಳ ನಂತರ ಕೆರೆ ತುಂಬಿ ಕೋಡಿ ಬಿದ್ದಿರುವುದು ಈ ಸಂಭ್ರಮಕ್ಕೆ ಕಾರಣವಾಗಿದೆ.
ಕೆರೆಗೆ ಬಾಗಿನ ಬಿಡುವ ಕಾರ್ಯಕ್ರಮ ಹಾಗೂ ಗಂಗಾ ಪೂಜೆ ಕಾರ್ಯಕ್ರಮವನ್ನು ಗ್ರಾಮಸ್ಥರು ಏರ್ಪಡಿಸಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಗ್ರಾಮಸ್ಥರ ಸಂತಸ ಹಿಮ್ಮಡಿಗೊಂಡಿತ್ತು.
ಕಳೆದ ಒಂದೂವರೆ ವರ್ಷದ ಹಿಂದೆ ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಕೆರೆ ಪುನಶ್ಚೇತನ ಕಾರ್ಯ ನಡೆದಿತ್ತು. ಗ್ರಾಮದ ಮುಖಂಡರು, ಯುವಕರು, ಮಹಿಳೆಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಿದ್ದರು.