Friday, November 28, 2025

ತವರು ನೆಲದಲ್ಲೇ ಸರಣಿ ಕ್ಲೀನ್ ಸ್ವೀಪ್: ಗಂಭೀರ್‌ ಮುಖ್ಯ ಕೋಚ್ ಸ್ಥಾನಕ್ಕೆ ಕಂಟಕ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರ್ಸಪರ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ತವರು ನೆಲದಲ್ಲೇ ಭಾರತವು 0-2 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್‌ಗೆ ಒಳಗಾದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಗಂಭೀರ್‌ ಅವರು ನೀಡಿದ ಹೇಳಿಕೆಗಳು ಈ ಊಹಾಪೋಹಗಳಿಗೆ ಇನ್ನಷ್ಟು ಪುಷ್ಠಿ ನೀಡಿದಂತಿದೆ.

ಸೋಲಿನ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಗಂಭೀರ್‌, ತಮ್ಮ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ, “ನಾನು ಮುಖ್ಯವಲ್ಲ, ಭಾರತೀಯ ಕ್ರಿಕೆಟ್‌ ಮುಖ್ಯ” ಎಂದು ನೇರವಾಗಿ ಹೇಳುವ ಮೂಲಕ ವಿಷಯಾಂತರ ಮಾಡಿದರು. ಇದು, ಟೀಂ ಇಂಡಿಯಾದ ದುರ್ಬಲ ಪ್ರದರ್ಶನದ ನಡುವೆ ತಮ್ಮ ವೈಯಕ್ತಿಕ ಪಾತ್ರಕ್ಕಿಂತ ದೇಶದ ಆಟದ ಮೇಲಿನ ಗಮನ ಹರಿಸಲು ಅವರು ಬಯಸಿದ್ದಾರೆ ಎಂಬುದನ್ನು ಸೂಚಿಸುತ್ತದೆ.

‘ನನ್ನ ಭವಿಷ್ಯ ಬಿಸಿಸಿಐಗೆ ಬಿಟ್ಟಿದ್ದು, ಆದರೆ ಸಾಧನೆಯನ್ನೂ ನೆನಪಿಡಿ’

ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಹುದ್ದೆಗೆ ತಾವೇ ಸರಿಯಾದ ವ್ಯಕ್ತಿಯೇ ಎಂಬ ಪತ್ರಕರ್ತರ ಮತ್ತೊಂದು ತೀಕ್ಷ್ಣವಾದ ಪ್ರಶ್ನೆಗೆ ಗಂಭೀರ್‌ ತಿರುಗೇಟು ನೀಡಿದರು.

“ನನ್ನ ಭವಿಷ್ಯವನ್ನು ನಿರ್ಧರಿಸುವುದು ಸಂಪೂರ್ಣವಾಗಿ ಬಿಸಿಸಿಐಗೆ ಬಿಟ್ಟಿದ್ದು. ಆದರೆ, ಇಂಗ್ಲೆಂಡ್‌ನಲ್ಲಿ ಸರಣಿ ಡ್ರಾ (2-2) ಮಾಡಿಸಿದ, ಹಾಗೆಯೇ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದೂ ಪಂದ್ಯ ಸೋಲದೆ ಟ್ರೋಫಿ ಗೆದ್ದ ತಂಡಕ್ಕೆ ಕೋಚ್ ಆಗಿದ್ದ ಅದೇ ವ್ಯಕ್ತಿ ನಾನೇ ಅನ್ನೋದನ್ನ ನೀವು ನೆನಪಿನಲ್ಲಿಡಬೇಕು,” ಎಂದು ಗಂಭೀರ್‌ ಖಡಕ್ ಆಗಿ ಉತ್ತರಿಸಿದರು.

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯನ್ನು ಭಾರತ ಡ್ರಾ ಮಾಡಿಕೊಂಡಿತ್ತು. ಅಲ್ಲದೆ, ಚಾಂಪಿಯನ್ಸ್ ಟ್ರೋಫಿ ವಿಜಯವು ಗಂಭೀರ್ ಅವರ ಕೋಚಿಂಗ್ ಅವಧಿಯ ಪ್ರಮುಖ ಸಾಧನೆಯಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್‌, ಟೆಸ್ಟ್‌ ಮಾದರಿಯಲ್ಲಿನ ಗುಣಮಟ್ಟದ ಕುರಿತು ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದರು.

“ನಾವು ಇನ್ನೂ ಉತ್ತಮವಾಗಿ ಆಡಬೇಕಿದೆ. ಟೆಸ್ಟ್ ಕ್ರಿಕೆಟ್ ಆಡಲು ನಮಗೆ ಅಬ್ಬರಿಸುವ, ಪ್ರತಿಭಾವಂತ ಕ್ರಿಕೆಟಿಗರ ಅಗತ್ಯವಿಲ್ಲ. ನಮಗೆ ಬೇಕಾಗಿರುವುದು ಸೀಮಿತ ಕೌಶಲ್ಯಗಳನ್ನು ಹೊಂದಿರುವ ಕಠಿಣ ಪಾತ್ರಗಳು. ಅವರೇ ಉತ್ತಮ ಟೆಸ್ಟ್ ಕ್ರಿಕೆಟಿಗರಾಗುತ್ತಾರೆ,” ಎಂದು ಗಂಭೀರ್‌ ಹೇಳಿದರು. 95ಕ್ಕೆ 1 ವಿಕೆಟ್‌ ಇದ್ದ ಸ್ಥಿತಿಯಿಂದ 127 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿರುವುದು ‘ಸ್ವೀಕಾರಾರ್ಹವಲ್ಲ’ ಎಂದು ಅವರು ಒಪ್ಪಿಕೊಂಡರು. ಈ ವೈಫಲ್ಯಕ್ಕೆ ಯಾರನ್ನೂ ದೂಷಿಸುವುದಿಲ್ಲ ಎಂದ ಕೋಚ್‌, ಮುಂದೆ ಈ ತಪ್ಪುಗಳು ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ನೇತೃತ್ವದಲ್ಲಿ, ಭಾರತದ ನೆಲದಲ್ಲಿ ಟೆಸ್ಟ್ ಸರಣಿಯನ್ನು 25 ವರ್ಷಗಳ ನಂತರ ಗೆದ್ದು, 27 ವರ್ಷಗಳ ನಂತರ ಟೆಸ್ಟ್ ಚಾಂಪಿಯನ್ ಕಿರೀಟವನ್ನು ಉಳಿಸಿಕೊಂಡಿದೆ.

error: Content is protected !!