ಹೊಸ ದಿಗಂತ ವರದಿ, ಗದಗ :
ಹಿಂದೂ ಸಂಸ್ಕೃತಿಯ ಬಗ್ಗೆ ಕೆಟ್ಟದಾಗಿ ಯಾರಾದರೂ ಮಾತನಾಡಿದರೆ ಆಕಾಶಕ್ಕೆ ಉಗುಳಿದಂತೆ, ಅವರ ಉಗುಳು ಅವರ ಮುಖದ ಮೇಲೆ ಬೀಳತ್ತೆ ಎಂದು ಹರಿಹರ ಪಂಚಮಸಾಲಿ ಪೀಠದ ಜ.ವಚನಾನಂದ ಶ್ರೀಗಳು ಹೇಳಿದರು.
ಅವರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂತಾರ ಚಲನಚಿತ್ರದಲ್ಲಿ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಅದ್ಭುತ ಕಾರ್ಯ ಮಾಡಿದ್ದಾರೆ.ಆ ಕಾರಣಕ್ಕಾಗಿ ಆ ಚಲನಚಿತ್ರ ತುಂಬಾ ಯಶಸ್ವಿಯಾಗಿದೆ. ಕಾಂತಾರ ಚಿತ್ರ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಲ್ಲ PAN ಇಂಡಿಯಾ ಆಗಿ ಜಗತ್ತಿನ ಎಲ್ಲಾ ಭಾಗಗಳಲ್ಲಿ ಪಸರಿಸಿದೆ. ಕಾರಣ ಅದರಲ್ಲಿ ಉದಾತ್ತವಾದ ಮೌಲ್ಯಗಳಿವೆ.ನಾವು ಅದನ್ನು ನೋಡಿಲ್ಲ, ಆದರೆ ಜನರ ಭಾವನೆಗಳು ಇದ್ದಾಗ ನಾವು ಗೌರವ ಕೊಡಬೇಕು. ನಮ್ಮ ಸಂಸ್ಕೃತಿ ಪರಂಪರೆಯನ್ನು ಟೀಕೆ ಮಾಡಬಾರದು ಎಂದರು.
ಭಾರತದಲ್ಲಿರೋವಂತವರೆಲ್ಲರೂ ಹಿಂದೂಗಳೇ ಹಿಂದೂ ಅನ್ನುವುದು ಒಂದು ಸನಾತನ ಸಂಸ್ಕೃತಿ ಪರಂಪರೆ ಹಿಂದೂ ಅನ್ನುವದು ಒಂದು ವಟವೃಕ್ಷ, ವಿಶಾಲ ಆಲದ ಮರ ಅದರಲ್ಲಿರೋವಂತಹ ಮತ ಪಂಥಗಳೆಲ್ಲವೂ ರೆಂಬೆ ಟೊಂಗೆಗಳಿದ್ದ ಹಾಗೆ ಹಾಗಾಗಿ ಅದನ್ನ ಬಿಟ್ಟು ನಾವು ಯಾರು ಇಲ್ಲ. ನಾವು ಹಚ್ಚಿಕೊಳ್ಳುವ ವಿಭೂತಿ, ಧರಿಸುವ ರುದ್ರಾಕ್ಷಿ ಎಲ್ಲವೂ ಹಿಂದೂ ಸಂಸ್ಕೃತಿ, ಸನಾತನ ಸಂಸ್ಕೃತಿಯ ಭಾಗವಾಗಿದೆ.ನಮ್ಮ ಸಂಸ್ಕೃತಿ ಪರಂಪರೆ ನಾವು ಬೆಳೆಸಿಕೊಳ್ಳುತ್ತ ಹೋಗಬೇಕು.ಮತ್ತು ಈ ರೀತಿ ಟೀಕೆ ಟಿಪ್ಪಣಿ ಮಾಡುವರನ್ನು ನಾವು ಉದಾಸೀನ ಮಾಡಬೇಕು ಎಂದು ಹೇಳಿದರು.