ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ರಕ್ಷಣಾ ಹಣ’ ಎಂದು 10 ಕೋಟಿ ರೂ.ಗಳನ್ನು ಪಾವತಿಸಿದ್ದೆ ಎಂದು ಆರೋಪಿಸಿ ಹಣ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಬಂಧಿತ ಸುಕೇಶ್ ಚಂದ್ರಶೇಖರ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ.
ವಂಚಕ ಸುಕೇಶ್ ತನ್ನ ಪತ್ರದಲ್ಲಿ, 2015 ರಿಂದ ಎಎಪಿ ನಾಯಕನ ಪರಿಚಯದಲ್ಲಿರುವುದಾಗಿ ಬರೆದಿದ್ದಾರೆ. ಪತ್ರದಲ್ಲಿ ದಕ್ಷಿಣ ಭಾರತದಲ್ಲಿ ಪ್ರಮುಖ ಪಕ್ಷದ ಸ್ಥಾನ ನೀಡುವ ಭರವಸೆ ನೀಡಿದ್ದರಿಂದ ಆಪ್ ಗೆ ಒಟ್ಟು 50 ಕೋಟಿ ರೂ. ಪಾವತಿಸಿರುವುದಾಗಿ ಹೇಳಿದ್ದಾರೆ.
“2017 ರಲ್ಲಿ ನನ್ನ ಬಂಧನದ ನಂತರ, ನನ್ನನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು ಮತ್ತು ಜೈಲು ಸಚಿವರ ಖಾತೆಯನ್ನು ಹೊಂದಿದ್ದ ಸತ್ಯೇಂದ್ರ ಜೈನ್ ಅವರು ಅನೇಕ ಬಾರಿ ಭೇಟಿ ನೀಡಿದ್ದರು … 2019 ರಲ್ಲಿ ಮತ್ತೆ ಜೈನ್ ನನ್ನನ್ನು ಭೇಟಿ ಮಾಡಿದರು, ಅವರ ಕಾರ್ಯದರ್ಶಿ ನನ್ನನ್ನು ಪ್ರತಿ ತಿಂಗಳು ರಕ್ಷಣಾ ಧನ ಮತ್ತು ಜೈಲಿನೊಳಗೆ ಮೂಲ ಸೌಕರ್ಯಗಳನ್ನು ಪಡೆಯಲು 2 ಕೋಟಿ ರೂ. ಪಾವತಿಸುವಂತೆ ಹೇಳಿದರು ಎಂದು ಚಂದ್ರಶೇಖರ್ ಅವರ ವಕೀಲರ ಮೂಲಕ ಕಳುಹಿಸಲಾದ ಪತ್ರದಲ್ಲಿ ಬರೆದಿದ್ದಾರೆ.
ಸುಕೇಶ್ ಚಂದ್ರಶೇಖರ್ ಉನ್ನತ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ. ಮೊದಲು ತಿಹಾರ್ ಜೈಲಿನಲ್ಲಿ ಇರಿಸಲಾಗಿತ್ತು ಆದರೆ ನಂತರ ಪದೇ ಪದೇ ವಿನಂತಿಸಿದ ನಂತರ ಸ್ಥಳಾಂತರಿಸಲಾಯಿತು. ತಿಹಾರ್ ಜೈಲಿನಿಂದ ತನಗೆ ಪ್ರಾಣ ಬೆದರಿಕೆ ಇದೆ ಎಂದು ಬಂಧಿತ ಸುಕೇಶ್ ಹೇಳಿಕೊಂಡಿದ್ದ.
ಏತನ್ಮಧ್ಯೆ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮುಂದಿನ ಕ್ರಮಕ್ಕಾಗಿ ಆಫ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ರವಾನಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಈ ವಿಷಯ ತಿಹಾರ್ ಜೈಲಿಗೆ ಸಂಬಂಧಪಟ್ಟಿರುವುದರಿಂದ ದೆಹಲಿ ಸರ್ಕಾರದ ಗೃಹ ಇಲಾಖೆ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.