ಹೊಸದಿಗಂತ ವರದಿ,ಬ್ಯಾಡಗಿ:
ಕೇಂದ್ರ ಹಾಗೂ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಜೊತೆಗೆ ದೂರದೃಷ್ಟಿ ಯೋಜನೆ ರೂಪಿಸಿದ್ದರಿಂದ ಬಿಜೆಪಿಗೆ ಜನ ಬೆಂಬಲವಿದೆ. ಮುಂದೆಯೂ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಹೇಳಿದರು.
ಶುಕ್ರವಾರ ಬ್ಯಾಡಗಿ ಪಟ್ಟಣದ ಪವಾಸಿ ಮಂದಿರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯುಡಿಯೂರಪ್ಪ ನವರು ಬ್ಯಾಡಗಿ ನಗರದಲ್ಲಿ ಜರುಗಲಿರುವ ಜನ ಸಂಕಲ್ಪ ಯಾತ್ರೆಗೆ ಆಗಮಿಸುವ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ವೀರ ಸಾವರ್ಕರ್ ಅವರಲ್ಲಿದ್ದ ದೇಶಭಕ್ತಿ, ಬುದ್ಧಿ ಶಕ್ತಿಯ ಗುಲಗಂಜಿಯಷ್ಟಾದರು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಬಳಿ ಇಲ್ಲ. ಅಧಿಕಾರದ ಕನಸು ಕಾಣುತ್ತಿರುವ ಕಾಂಗ್ರೆಸ್ಗೆ ಮತ್ತೆ ನಿರಾಶೆಯಾಗಲಿದೆ. ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ವಿಭಜನೆ ಮಾಡುವ ಮೂಲಕ ೬೦ ಲಕ್ಷ ಜನರ ಸಾವು ನೋವುಗಳಿಗೆ ಕಾರಣರಾದವರು ಕಾಂಗ್ರೆಸ್ನವರು ಯಾವ ಮಾನದಂಡವನ್ನು ಇಟ್ಟುಕೊಂಡು ಭಾರತ ಜೋಡೋ ಯಾತ್ರೆ ಕೈಗೊಳ್ಳುತ್ತಿರೋ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ದೂರದೃಷ್ಟಿಯ ಯೋಜನೆಗಳನ್ನು ಜಾರಿಗೊಳಿಸುವೆ. ಜನರ ನಾಡಿಮಿಡಿತ ಅರಿತಿವೆ. ಮುಂಬರುವ ಚುನಾವಣೆಯಲ್ಲಿ ೧೫೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಭವಿಷ್ಯ ನುಡಿದರು.
ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಮೂರುವರೆ ವರ್ಷದಲ್ಲಿ ಅಭಿವೃದ್ದಿ ಮಹಾಪೂರ ಹರಿದಿದೆ. ಕಾರ್ಯಕರ್ತರು ಬಿಜೆಪಿ ಶಕ್ತಿಯನ್ನು ತೋರಬೇಕಿದೆ. ದೂರದೃಷ್ಟಿ ಯೋಜನೆ ಮೂಲಕ ದೊಡ್ಡ ಯೋಜನೆಗಳನ್ನು ಜಾರಿಗೊಳಿಸಿದೆ. ನೆರೆಹಾವಳಿ, ಕೋವಿಡ್ ಹಾವಳಿಯಲ್ಲಿ ಪರಿಹಾರ ಕಲ್ಪಿಸಿದ್ದೇವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಕಾರ್ಯಕರ್ತರು ಉತ್ತರಿಸಲಿದ್ದಾರೆ ಎಂದರು.
ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ಜನಸ್ಪಂದನ ಕಾರ್ಯಕ್ರಮ ಮುಂದಿನ ಚುನಾವಣೆ ದಿಕ್ಸೂಚಿಯಾಗಲಿದ್ದು, ವಿಪಕ್ಷದವರಿಗೆ ನಮ್ಮ ಗೆಲುವಿನ ಸೂಚನೆ ನೀಡುವ ನಿಟ್ಟಿನಲ್ಲಿ ಜನ ಸೇರಬೇಕು. ಬೊಮ್ಮಾಯಿ ಸಿ.ಎಂ. ಆದ ಬಳಿಕ ರಾಜ್ಯ ಅಭಿವೃದ್ದಿ ಕಂಡಿದೆ. ೨೦೨೩ ರಲ್ಲಿ ೧೫೦ ಶಾಸಕರು ಆಯ್ಕೆಯಾಗಬೇಕಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಸಂಶಯವಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಹಾಲೇಶ ಜಾಧವ, ಪುರಸಭೆ ಅಧ್ಯಕ್ಷೆ ಪಕ್ಕೀರಮ್ಮ ಚಲವಾದಿ, ಎಂ.ಎಸ್.ಪಾಟೀಲ, ಬಸವರಾಜ ಛತ್ರದ, ಮುರಿಗೆಪ್ಪ ಶೆಟ್ಟರ, ವಿಜಯ ಭರತ್ ಬಳ್ಳಾರಿ, ಕಲ್ಲೇಶ ಎಲ್.ಎನ್, ಸುರೇಶ ಆಸಾದಿ, ಶಶಿಧರ್ ಹೊಸಳ್ಳಿ, ವೀರೇಂದ್ರ ಶೆಟ್ಟರ್, ಬಸವರಾಜ ಛತ್ರದ ಸೇರಿದಂತೆ ಇನ್ನಿತರರಿದ್ದರು.