ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯೊಬ್ಬರು ಎರಡು ದಿನಗಳಿಂದ ರಸಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು, ಆರೋಗ್ಯ ಏಕಾಏಕಿ ಹದಗೆಟ್ಟು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.
ಭೂರಿಯಾ ಬಾಯಿ ಎಂಬ 50 ವರ್ಷದ ಮಹಿಳೆ ಮಂಗಳವಾರ ಬಮೋರಿ ಪ್ರದೇಶದ ರಸಗೊಬ್ಬರ ವಿತರಣಾ ಕೇಂದ್ರಕ್ಕೆ ಬಂದಿದ್ದರು. ಆದರೆ ಸ್ಟಾಕ್ ಲಭ್ಯವಿಲ್ಲದ ಕಾರಣ ಚೀಲವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅವರು ಮರುದಿನ ಮತ್ತೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತರು. ಸಂಜೆಯವರೆಗೂ ಸರಬರಾಜು ಬರದ ಕಾರಣ, ಅವರು ತೀವ್ರ ಚಳಿಯಲ್ಲಿ ಕೇಂದ್ರದ ಹೊರಗೆ ರಾತ್ರಿ ಕಳೆದರು, ನಂತರ ಅವರ ಆರೋಗ್ಯವು ಶೀಘ್ರವಾಗಿ ಹದಗೆಟ್ಟಿತ್ತು.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತ ಕುಟುಂಬಕ್ಕೆ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆದಾಗ್ಯೂ, ರಸಗೊಬ್ಬರ ಕೊರತೆಯ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮಹಿಳೆಗೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು, ತಡರಾತ್ರಿಯಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ ಎಂದು ಗುಣ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಕನ್ಯಾಲ್ ಹೇಳಿದ್ದಾರೆ. ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಸಾಕಷ್ಟು ಇದೆ ಎಂದು ಅವರು ಹೇಳಿದ್ದಾರೆ.ಟೋಕನ್ ವ್ಯವಸ್ಥೆ ಈಗಾಗಲೇ ಇದೆ, ರೈತರು ವಿತರಣಾ ಕೇಂದ್ರಗಳಲ್ಲಿ ರಾತ್ರಿಯಿಡೀ ತಂಗಬಾರದು ಎಂದು ಸೂಚನೆ ನೀಡಿದ್ದಾರೆ.

