ಹೊಸದಿಗಂತ ವರದಿ ಮಂಗಳೂರು:
ನಗರದಲ್ಲಿ ಶನಿವಾರ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿಯನ್ನು ಶಿವಮೊಗ್ಗ ಮೂಲದ ಮುಹಮ್ಮದ್ ಶಾರೀಕ್ ಎಂದು ಗುರುತಿಸಲಾಗಿದೆ. ಅರೋಪಿಯ ಸಂಬಂಧಿಕರು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯ ಗುರುತು ಪತ್ತೆ ಮಾಡಿದ್ದಾರೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಆರೋಪಿ ಬಳಿ ಸಿಕ್ಕಿದ ಆಧಾರ್ ಕಾರ್ಡ್ ನಲ್ಲಿ ಆತನ ಹೆಸರು ಪ್ರೇಮರಾಜ್ ಹುಟಗಿ ಎಂದು ನಮೂದಾಗಿತ್ತು. ಆದರೆ, ಅದು ನಕಲಿ ಎಂದು ದೃಢಪಟ್ಟಿದೆ. ಆರೋಪಿ ಈ ಹಿಂದೆ ಮಂಗಳೂರು ಗೋಡೆ ಬರಹ ಪ್ರಕರಣ ಹಾಗೂ ಕೆಲ ತಿಂಗಳ ಹಿಂದೆ ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಆರೋಪಿಯಾಗಿದ್ದ.
ಶಾರೀಕ್ ಮೈಸೂರಿನಲ್ಲಿ ಇದ್ದ ಬಾಡಿಗೆ ಮನೆಯಲ್ಲಿ ಬಳಸುತ್ತಿದ್ದ ಹಾಗೂ ಅಲ್ಲಿ ದೊರೆತ ವಸ್ತುಗಳನ್ನು ವಶಪಡಿಸಿಕೊಂಡು ಮಂಗಳೂರಿಗೆ ತರಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಇದುವರೆಗೆ ವಶಕ್ಕೆ ಪಡೆಯಲಾಗಿದೆ. ಏಳು ಕಡೆ ಪರಿಶೀಲನೆ ನಡೆಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.