ಹೊಸದಿಗಂತ ವರದಿ,ಕೊಪ್ಪಳ:
ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹಿಂಗಾರು ಬೆಳೆಗೆ 2023ರ ಏ. 10ರವರೆಗೆ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ , ಸಚಿವ ಆನಂದ್ ಸಿಂಗ್ ತಿಳಿಸಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ 118 ನೇ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸದ್ಯ ಜಲಾಶಯದಲ್ಲಿ 94.749 ಟಿಎಂಸಿ ನೀರು ಸಂಗ್ರಹವಾಗಿದೆ. ಆವಿಯಾಗುವಿಕೆ, ಸಿಸ್ಟಂ ಲಾಸ್ ಮತ್ತು ಡೆಡ್ ಸ್ಟೋರೇಜ್ ಗೆ 7.828 ಟಿಎಂಸಿ ಕಾಯ್ದಿರಿಸಲಾಗಿದೆ. ರಾಜ್ಯದ ಪಾಲು 55.580 ಟಿಎಂಸಿ, ಆಂಧ್ರಕ್ಕೆ 33.396 ಟಿಎಂಸಿ, ತೆಲಂಗಾಣ ಕ್ಕೆ 5.773 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಪ್ರಸಕ್ತ ನೀರಾವರಿ ವರ್ಷದಲ್ಲಿ ಜಲಾಶಯ ಕ್ಕೆ 600 ಟಿಎಂಸಿ ನೀರು ಹರಿದು ಬಂದಿದೆ. ಇದರಲ್ಲಿ 439.643 ಟಿಎಂಸಿ ನದಿಗೆ ಹರಿದು ಹೋಗಿದೆ ಎಂದು ತಿಳಿಸಿದರು.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.1 ರಿಂದ 12 ರವರೆಗೆ ಸರಾಸರಿ 2 ಸಾವಿರ ಕ್ಯೂಸೆಕ್, ಡಿ.16 ರಿಂದ 31ರವರೆಗೆ 2500 ಕ್ಯೂಸೆಕ್, 2023 ಜ.1 ರಿಂದ ಮಾಚ್೯ 31 ರವರೆಗೆ 3500 ಕ್ಯೂಸೆಕ್ ನೀರು ಹರಿಸಲಾಗಿವುದು. ಕುಡಿಯುವ ನೀರಿಗಾಗಿ 2023 ಏ.1 ರಿಂದ 10 ರವರೆಗೆ 1484 ಕ್ಯೂಸೆಕ್, ಏ.11 ರಿಂದ ಮೇ 5 ರವರೆಗೆ 100 ಕ್ಯೂಸೆಕ್ ನಂತೆ ವಿಜಯನಗರ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲಾಗುವುದು ಎಂದರು.