ಉಪ್ಪು, ಸಕ್ಕರೆ ಇಲ್ಲದೆ ಯಾವ ಅಡುಗೆ ಸಾಧ್ಯ ಹೇಳಿ, ಸಿಹಿ ಇಲ್ಲದೆ ಅಡುಗೆ ಇಲ್ಲ, ಉಪ್ಪಿಲ್ಲದೆ ರುಚಿ ಇಲ್ಲ. ಮಕ್ಕಳಾದರೇನು, ದೊಡ್ಡವರಾದರೇನು ಅವರಿಗೆ ರುಚಿ ಬೇಕೇ ಬೇಕು. ತಿನ್ನಿಸೋದು ರಾಗಿ ಸೆರಿ ಅಷ್ಟೆ, ಅದಕ್ಕೆ ಚೂರಾದ್ರೂ ಉಪ್ಪು, ಬೆಲ್ಲ ಹಾಕದಿದ್ರೆ ಹೇಗೆ? ಮಕ್ಕಳು ತಿನ್ನೋದಿಲ್ಲ ಎಂದು ದೊಡ್ಡವರು ಕಣ್ಣು ತಪ್ಪಿಸಿಯಾದ್ರೂ ಸ್ವಲ್ಪ ಉಪ್ಪು, ಸಕ್ಕರೆ ಹಾಕಿಬಿಡ್ತಾರೆ. ಆದರೆ ಇದು ಸರಿಯಾ?
ನಾವು ನೋಡಿರುವಷ್ಟು ಮಕ್ಕಳನ್ನು ನೀವು ನೋಡಿಲ್ಲ, ನಮ್ಮೆಲ್ಲಾ ಮಕ್ಕಳಿಗೆ ಬೆಲ್ಲ ಹಾಕೇ ತಿನ್ನಿಸ್ತೀವಿ ಎಂದು ದೊಡ್ಡವರು ಹೇಳ್ತಾರೆ. ಆದರೆ ಮಕ್ಕಳಿಗೆ ಉಪ್ಪು, ಸಕ್ಕರೆ ಯಾವ ಕಾರಣಕ್ಕೂ ನೀಡಬೇಡಿ.
ಸಕ್ಕರೆ ಅಂಶ ಮಕ್ಕಳ ಆರೋಗ್ಯದಲ್ಲಿ ಏರು ಪೇರು ಮಾಡಿಸುತ್ತದೆ. ಮಕ್ಕಳಿಗೆ ಹಲ್ಲು ಬರಲು ಕೂಡ ಸಕ್ಕರೆ ಅಂಶ ತೊಂದರೆಕೊಡುತ್ತದೆ. ಈಗ ಅರ್ಧ ಚಮಚ ಸಕ್ಕರೆ ಹಾಕಿ ರಾಗಿ ಸೆರಿ ತಿನಿಸುತ್ತಾ ಹೋದರೆ, ಮುಂದೆ ಒಂದು ಚಮಚ ಸಕ್ಕರೆ ರುಚಿಗೆ ಬೇಕು, ಹಾಗೆ ಸಿಹಿ ತಿಂಡಿಗಳನ್ನು ಇಷ್ಟಪಡುತ್ತಾ ಹೋಗುತ್ತಾರೆ.
ಮಕ್ಕಳಲ್ಲಿ ಸಿಹಿ ತಿಂದು ಹಲ್ಲು ನೋವು ತರಿಸಿಕೊಂಡವರಿಗೆ ಲೆಕ್ಕ ಇದೆಯೇ? ಹಲ್ಲುನೋವಿನಿಂದ ಮಕ್ಕಳು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇದು ದೊಡ್ಡವರಿಗೂ ಪರೀಕ್ಷೆ ಸಮಯ. ಹಾಗಾಗಿ ಹಲ್ಲು ಹಾಳಾಗದಂತೆ ನೋಡಿಕೊಳ್ಳಲು ಸಿಹಿಯಿಂದ ದೂರ ಇರಿಸಿ.
ಇನ್ನು ಒಂದು ಚಿಟಿಕೆ ಉಪ್ಪು ಕೂಡ ಮಕ್ಕಳಿಗೆ ಕೊಡಬೇಡಿ. ಅವರ ಕಿಡ್ನಿ ಉಪ್ಪನ್ನು ಹಿಡಿದುಕೊಳ್ಳುವುದಿಲ್ಲ. ಮುಂದೆ ಇದರಿಂದಾಗಿ ಬೇರೆ ಬೇರೆ ರೀತಿಯ ಸಮಸ್ಯೆಗಳು ಬರಬಹುದು.