ಹೊಸದಿಗಂತ ಡಿಜಿಟಲ್ ಡೆಸ್ಕ್
ಸರ್ಕಾರಿ ಅನುದಾನಿತ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳ ಪ್ರವೇಶದ ಕುರಿತು ವಿಸ್ತೃತ ತನಿಖೆ ನಡೆಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್ಸಿಪಿಸಿಆರ್)ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಸಾಗಳನ್ನು ಗುರುತಿಸಬೇಕು. ಹಾಗೆಯೇ, ಮುಸ್ಲಿಮೇತರ ಮಕ್ಕಳಿಗೂ ಮದರಸಾಗಳಿಗೆ ಪ್ರವೇಶ ನೀಡುತ್ತಿರುವುದರ ಕುರಿತು ವಿಸ್ತೃತವಾದ ತನಿಖೆ ನಡೆಸಬೇಕು. ಹಾಗೆ, ಮುಸ್ಲಿಮೇತರ ಮಕ್ಕಳನ್ನು ಗುರುತಿಸಿ, ಅವರನ್ನು ಪುನಾ ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ದೇಶದ ಸಂವಿಧಾನವು ಮಕ್ಕಳು ಯಾವುದೇ ಭೇದ-ಭಾವ, ಪಕ್ಷಪಾತ ಅಥವಾ ಪೂರ್ವಗ್ರಹವಿಲ್ಲದ ಶಿಕ್ಷಣ ನೀಡಬೇಕು. ಮಕ್ಕಳು ಔಪಚಾರಿಕ ಶಿಕ್ಷಣ ಪಡೆಯಬೇಕು ಎಂಬುದು ಶೈಕ್ಷಣಿಕ ಹಕ್ಕು ಕಾಯ್ದೆ (2009)ಯ ಉದ್ದೇಶವಾಗಿದೆ. ಆದರೆ, ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಮದರಸಾಗಳು ಧಾರ್ಮಿಕ ಶಿಕ್ಷಣ ನೀಡುವ ಸಂಸ್ಥೆಗಳಾಗಿವೆ. ಹಾಗಾಗಿ, ಮುಸ್ಲಿಮೇತರ ಮಕ್ಕಳನ್ನು ಮದರಸಾಗಳಿಗೆ ಸೇರಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಎನ್ಸಿಪಿಸಿಆರ್ ತಿಳಿಸಿದೆ.
೩೦ ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಕೂಡ ಆದೇಶದಲ್ಲಿ ತಿಳಿಸಲಾಗಿದೆ. ತನಿಖಾ ವರದಿ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.