ಹೊಸ ದಿಗಂತ ವರದಿ, ವಿಜಯಪುರ:
ಕಾಂಗ್ರೆಸ್ನವರು ಯಾಕೆ ದಲಿತ ಸಿಎಂ ಮಾಡಲಿಲ್ಲ. ಯಾರಾದರೂ ಆಣೆ ಹಾಕಿದ್ದರಾ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಹಲವು ವರ್ಷ ಕಾಂಗ್ರೆಸ್ ನವರೇ ಆಡಳಿತ ಮಾಡಿದ್ದಾರೆ. ದಲಿತರನ್ನು ಪ್ರಧಾನಮಂತ್ರಿ ಮಾಡಬಹುದಿತ್ತು. ಆದರೂ, ಮಾಡಲಿಲ್ಲ ಎಂದು ದೂರಿದರು.
ದಲಿತರನ್ನು ಪ್ರಧಾನಮಂತ್ರಿ ಮಾಡಬೇಕು ಎಂದು ಅಟಲ್ ಬಿಹಾರಿ ವಾಜಪೇಯಿ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೇ, ಬಾಬು ಜಗಜೀವನರಾಮ್ ಪ್ರಧಾನಿ ಆಗಬಹುದಿತ್ತು. ಆಗ ಕಾಂಗ್ರೆಸ್ ನವರು ವಿರೋಧ ಮಾಡಿ ಹೀನಾಯವಾಗಿ ಸೋಲಿಸಿದರು ಎಂದು ಟೀಕಿಸಿದರು.
ಅಲ್ಲದೇ, ಕಾಂಗ್ರೆಸ್ನಿಂದ ದಲಿತರ ಉದ್ಧಾರ ಆಗಲಿಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ನದು ಹೀನ ಮನಸ್ಥಿತಿ ಇದೆ. ದಲಿತರು ವಿದ್ಯಾವಂತರಾಗಬಾರದು. ಅವರ ಕಾಲ ಮೇಲೆ ದಲಿತರು ನಿಲ್ಲಬಾರದು ಎನ್ನುವ ಮನಸ್ಥಿತಿ ಇದೆ ಎಂದರು.