ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಾ ಮತ್ತು ಭದ್ರಾ ನದಿ ತೀವ್ರ ಕಲುಷಿತ ಆಗಿರುವ ಹಿನ್ನೆಲೆಯಲ್ಲಿ ನದಿ ಪಾತ್ರದುದ್ದಕ್ಕೂ ಪಾದಯಾತ್ರೆ ನಡೆಸಿ ಅರಿವು ಮೂಡಿಸುವುದು, ಅಧ್ಯಯನದ ಮೂಲಕ ಸ್ಥಳೀಯ ಸಂಸ್ಥೆ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲು ಪರಿಸರ ಆಸಕ್ತರು ಮುಂದಾಗಿದ್ದಾರೆ.
ನಗರದ ಎಬಿವಿಪಿ ಕಾರ್ಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ಜೀವನದಿ ತುಂಗೆ-ಗಂಗೆಯರು: ಅಂದು-ಇಂದು-ಮುಂದು, ಚಿಂಥನ-ಮಂಥನ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ನಿವೃತ್ತ ಪ್ರಾಂಶುಪಾಲ ಹಾಗೂ ಪರಿಸರಪರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ ಸಭೆಯಲ್ಲಿ ಮಾತನಾಡಿ, ತುಂಗಾ ನದಿ ಆರಂಭದಿಂದ ಹೊಸಪೇಟೆ ತನಕ ನದಿ ಹಾದು ಹೋಗಿರುವ ಕಡೆಯಲ್ಲಿ ಪಾದಯಾತ್ರೆ ನಡೆಸಬಹುದು. ಇದಕ್ಕೆ ಪಕ್ಕಾ ಯೋಜನೆ ಅಗತ್ಯ ಎಂದರು.
1998 ರಲ್ಲಿ ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ ನಡೆಸಿದ್ದೇವೆ. ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಗೋವಾವರೆಗೂ ಪಾದಯಾತ್ರೆ ನಡೆಸಲಾಗಿತ್ತುಘಿ. ಅದೇ ರೀತಿ ಇಲ್ಲಿಯೂ ಮಾಡಬಹುದು. ಕಳೆದ ವರ್ಷ ಗೋವಿಂದಾಚಾರ್ಯ ನೇತೃತ್ವದಲ್ಲಿ ನಿರ್ಮಲ ಗಂಗೆ ಪಾದಯಾತ್ರೆ ನಡೆದಿದೆ. ಶಿವಮೊಗ್ಗದಿಂದಲೂ ಕಾಲೇಜು ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿ ಬಂದಿದ್ದಾರೆ. ಅವರ ಅನುಭವದ ಆಧಾರದ ಮೇಲೆ ಪಾದಯಾತ್ರೆ ಯೋಜನೆ ರೂಪಿಸಬಹುದು ಎಂದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಎಸ್.ಚಂದ್ರಶೇಖರ್ ಮಾತನಾಡಿ, ಪಾದಯಾತ್ರೆಗೂ ಮೊದಲು ತಯಾರಿ ಬಹಳ ಅಗತ್ಯಘಿ. ಅದಕ್ಕಾಗಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಳ್ಳಬೇಕು ಎಂದರು.
ಶೃಂಗೇರಿ ಯಿಂದ ಆರಂಭಿಸೋಣ
ನವ್ಯಶ್ರೀ ನಾಗೇಶ್ ಮಾತನಾಡಿ, ನದಿ ಮೂಲದಿಂದ ಪಾದಯಾತ್ರೆ ಆರಂಭದ ಬದಲು ಎಲ್ಲಿ ಆರಂಭದಲ್ಲಿ ಕಲುಷಿತ ಆಗಿದೆಯೋ ಅಲ್ಲಿಂದ ಯಾತ್ರೆ ಆರಂಭಿಸಬಹುದು. ತುಂಗಾ ನದಿ ಪಾದಯಾತ್ರೆಯನ್ನು ಶೃಂಗೇರಿಯಿಂದ ಪ್ರಾರಂಭ ಮಾಡಬಹುದು ಎಂದರು.
ಜಾಲತಾಣ ಬಳಸಬಹುದು
ಸರ್ಜಿ ಫೌಂಡೇಶನ್ನ ಡಾ.ಧನಂಜಯ ಸರ್ಜಿ ಸಭೆಯಲ್ಲಿ ಮಾತನಾಡಿ, ಗಂಗಾ ಯಾತ್ರೆಗೆ ಹೋಗಿ ಬಂದವರು ಅಲ್ಲಿ ಕಂಡ ಅನುಭವಗಳನ್ನು ಜಾಲ ತಾಣದಲ್ಲಿ ಹಂಚಿಕೊಳ್ಳಬೇಕು. ಜೊತೆಗೆ ತುಂಗಾ ನದಿ ಎಲ್ಲೆಲ್ಲಿ ಕಲುಷಿತ ಆಗಿದೆ ಎಂಬ ಬಗ್ಗೆಯೂ ಜಾಲತಾಣದ ಮೂಲಕ ಮಾಹಿತಿ ನೀಡಿ ಅರಿವು ಮೂಡಿಸಬಹುದು. ಆರಂಭದಲ್ಲಿ ಶಿವಮೊಗ್ಗ ದಿಂದ ಹೊನ್ನಾಳಿವರೆಗೆ ಪಾದಯಾತ್ರೆ ನಡೆಸಬಹುದು ಎಂದರು.
ಪರಿಸರ ಕಾರ್ಯಕರ್ತ ಬಾಲಕೃಷ್ಣ ,ಮೆಗ್ಗಾನ್ ಆಸ್ಪತ್ರೆ ಈಕ್ಷಕ ಡಾ.ಶ್ರೀಧರ್, ತ್ಯಾಗರಾಜ ಮಿಥ್ಯಾಂತ, ಉಮೇಶ್, ಮಂಜುನಾಥ್, ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ