ಹೊಸದಿಗಂತ ವರದಿ ಗದಗ :
ಅತಿಥಿ ಶಿಕ್ಷಕನ ವಿಕೃತಿ ಮನಸ್ಸಿನಿಂದ ಮಾಡಿದ ಹಲ್ಲೆಯಿಂದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿ ವಿದ್ಯಾರ್ಥಿಯ ತಾಯಿ ಹಾಗೂ ಸಹ ಶಿಕ್ಷಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನರಗುಂದ ತಾಲ್ಲೂಕಿನ ಹದಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದೆ.
ಸರಕಾರಿ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬವನು ಪ್ರಾರ್ಥನೆ ಮುಗಿದ ನಂತರ ಭರತ ಬಾರಕೇರ (10) ಎಂಬ ವಿದ್ಯಾರ್ಥಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ನಂತರ ಮೊದಲನೆ ಅಂತಸ್ತಿನಿಂದ ತಲೆ ಕೆಳಗೆ ಮಾಡಿ ಎಸೆದಿದ್ದಾನೆ. ಇದನ್ನು ನೋಡಿದ ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ವಿದ್ಯಾರ್ಥಿಯ ತಾಯಿ ಓಡೋಡಿ ಬಂದು ಪ್ರಶ್ನೆ ಮಾಡಿದ್ದಾಳೆ.
ಅವಳ ಮೇಲೆಯೂ ಸಹ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಯಾಗುವುದನ್ನು ತಡೆಯಲು ಬಂದ ಮತ್ತೋರ್ವ ಶಿಕ್ಷಕ ಸಂಗನಗೌಡ ಪಾಟೀಲ ಇವರ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ವಿಷಯ ತಿಳಿದ ಗ್ರಾಮಸ್ಥರು ಶಾಲೆಗೆ ಆಗಮಿಸಿ ಗಾಯಗೊಂಡವರನ್ನು, ಕೂಡಲೇ ನರಗುಂದ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಾಥಮಿಕ ಚಿಕಿತ್ಸೆಯನ್ನು ಅವರಿಬ್ಬರಿಗೂ ನೀಡಿ ಹುಬ್ಬಳ್ಳಿ ಕಿಮ್ಸಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಿದ್ದಾರೆ. ಮಾರ್ಗ ಮಧ್ಯ ಬಾಲಕನು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಅವನ ತಾಯಿ ಗೀತಾ ಬಾರಕೇರ (ಅತಿಥಿ ಶಿಕ್ಷಕಿ) ಅವಳು ಗಂಭೀರವಾಗಿವಾಗಿ ಗಾಯಗೊಂಡಿದ್ದರಿಂದ ಅವಳನ್ನು ಹುಬ್ಬಳ್ಳಿ ಕಿಮ್ಸಗೆ ಕಳಿಸಿದ್ದಾರೆ. ಅವಳು ಸಹ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ.