ಹೊಸದಿಗಂತ ವರದಿ, ಬಳ್ಳಾರಿ:
ಜಿಲ್ಲಾಡಳಿತ ಮೊದಲ ಬಾರಿಗೆ ಆಯೋಜಿಸಿದ ಬಳ್ಳಾರಿ ಉತ್ಸವ ಹಂಪಿ ಉತ್ಸವಕ್ಕೆ ಸರಿಸಾಟಿಯಾಗಿ ನಡೆದಿದ್ದು, ಎರಡು ದಿನಗಳ ಈ ಉತ್ಸವಕ್ಕೆ ಭಾನುವಾರ ತೆರೆಬಿದ್ದಿತು. ಉತ್ಸವದಲ್ಲಿ ಎರಡೂ ದಿನವೂ ಜನಸಾಗರವೇ ಹರಿದು ಬಂತು. ಬಿಸಿಲನಗರಿ ಎಂದು ಹೆಗ್ಗಳಿಕೆಗೆ ಪಾತ್ರವಾದ ಗಣಿನಾಡು ಬಳ್ಳಾರಿಯಲ್ಲಿ ಛಳಿ, ತಣ್ಣನೆ ಗಾಳಿ ಮಧ್ಯೆ ಬಳ್ಳಾರಿಯ ಜನರು ಉತ್ಸವದ ವೇದಿಕೆ ಕಡೆಗೆ ಹೆಜ್ಜೆಹಾಕಿ, ನಗರದ ಮುನ್ಸಿಪಲ್ ಮೈದಾನ ಮುಖ್ಯವೇದಿಕೆ ಹಾಗೂ ಶ್ರೀ ಕೋಟೆ ಮಲ್ಲೇಶ್ವರ ದೇಗುಲದ ಬಳಿಯ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಮುನ್ಸಿಪಲ್ ಮೈದಾನದಲ್ಲಿ ಉತ್ಸವ ನಿಮಿತ್ತ ಆಯೋಜಿಸಿದ ವಿವಿಧ ಮಳಿಗೆಗಳು ಜನರಿಂದ ತುಂಬಿ ತುಳುಕಿದವು. ಫಲ ಪುಷ್ಪ ಪ್ರದರ್ಶನ, ಮತ್ಸಮೇಳ, ಸಹಾಸ ಕ್ರೀಡೆ, ಬೈಸ್ಕೈ, ಅಡುಗೆ ಸ್ಪರ್ಧೆ, ಶ್ವಾನಗಳ ಪ್ರದರ್ಶನ, ಎತ್ತಿನ ಗಾಡಿಗಳ ಮೆರವಣಿಗೆ, ಭವ್ಯ ವಸಂತ ವೈಭವ ಮೆರವಣಿಗೆ ಸೇರಿದಂತೆ ಉತ್ಸವ ಎಲ್ಲ ಕಾರ್ಯಕ್ರಮಗಳಲ್ಲಿ ಜನರು ಅತ್ಯುತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.
ಮೊದಲ ಉತ್ಸವ: ಗಣಿನಾಡು ಬಳ್ಳಾರಿ ಅಖಂಡ ಜಿಲ್ಲೆ ವಿಭಜನೆಯಾದ ಬಳಿಕ ಮೊದಲ ಬಾರಿಗೆ ನಡೆದ ಈ ಬಳ್ಳಾರಿ ಉತ್ಸವ ಅತ್ಯಂತ ಯಶಸ್ವಿಯಾಗಿ ತೆರೆ ಕಂಡಿತು. ಕಲೆ, ಸಾಂಸ್ಕೃತಿಕ, ಉತ್ಸವದ ಮೆರಗಿನ ಕೊರಗನ್ನು ನೀಗಿಸುವಲ್ಲಿ ಬಳ್ಳಾರಿ ಉತ್ಸವ ಗಮನಸೆಳೆಯಿತು. ಅಖಂಡ ಜಿಲ್ಲೆಯಾಗಿದ್ದ ಬಳ್ಳಾರಿ ಸಂದರ್ಭದಲ್ಲಿ ಪ್ರತಿವರ್ಷ ಆಚರಿಸುವ ಹಂಪಿ ಉತ್ಸವದಲ್ಲಿ ಜಿಲ್ಲೆ ಸೇರಿದಂತೆ ನಾನಾ ಕಡೆಗಳಿಂದ ಲಕ್ಷಾಂತರ ಜನರು ಭಾಗವಹಿಸಿ ಸಂಭ್ರಮಿಸುತ್ತಿದ್ದರು. ಆದರೇ, ಅಖಂಡ ಜಿಲ್ಲೆ ವಿಭಜನೆಯಾದ ಬಳಿಕ ಮೊದಲ ಬಾರಿಗೆ ನಡೆದ ಬಳ್ಳಾರಿ ಉತ್ಸವ ಹಂಪಿ ಉತ್ಸವವನ್ನು ನೆನಪಿಸುವಂತೆ ಗೋಚರಿಸಿತು. ಹಂಪಿ ಉತ್ಸವದ ಸಂಭ್ರಮದಂತೆ ಎರಡು ದಿನಗಳ ಬಳ್ಳಾರಿ ಉತ್ಸವದ ಎಲ್ಲ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆದವು.
ಸಮಾರಂಭದಿಂದ ದೂರ: ಬಳ್ಳಾರಿ ಉತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ ನಾನಾ ಕಾರ್ಯಕ್ರಮಗಳಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಉತ್ಸವದ ಉದ್ಘಾಟನಾ ಸಮಾರಂಭದಿಂದ ದೂರ ಉಳಿದಿದ್ದರು. ಉತ್ಸವ ಆಹ್ವಾನ ಪತ್ರಿಕೆಯಲ್ಲಿ ಹಾಲಿ ಶಾಸಕರ ಹೆಸರುಗಳನ್ನು ಹಾಕಿಸಿದ್ದರೂ ವೇದಿಕೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಂಸದ ವೈ.ದೇವೇಂದ್ರಪ್ಪ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಚಿವ ಆನಂದ್ ಸಿಂಗ್, ಸಂಡೂರು ಶಾಸಕ ಈ.ತುಕಾರಾಂ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಸೇರಿದಂತೆ ಇತರರು ಗೈರಾಗಿರುವುದು ಎದ್ದು ಕಾಣಿಸಿತು.