ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಮಾದರಿಯಲ್ಲಿ ಮಸೀದಿ ನಿರ್ಮಾಣಕ್ಕೆ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಇಂದು ಬೆಳಗ್ಗೆಯಿಂದ ಸಾವಿರಾರು ಜನ ಸೇರಿದ್ದ ಸ್ಥಳದಲ್ಲಿ “ನಾರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್” ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ, ಕಬೀರ್ ಅವರು ವೇದಿಕೆಯ ಮೇಲೆ ಧರ್ಮಗುರುಗಳ ಜೊತೆಗೆ ವಿಧ್ಯುಕ್ತವಾಗಿ ರಿಬ್ಬನ್ ಕತ್ತರಿಸುವ ಮೂಲಕ ‘ಬಾಬ್ರಿ ಮಸೀದಿ’ಗೆ ಅಡಿಪಾಯ ಹಾಕಿದರು.
ಕೋಮು ರಾಜಕೀಯದಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಟಿಎಂಸಿ ಈ ವಾರದ ಆರಂಭದಲ್ಲಿ ಕಬೀರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಈ ತಿಂಗಳ ಆರಂಭದಲ್ಲಿ ಕಬೀರ್ ಅವರು ಶಂಕುಸ್ಥಾಪನೆ ಸಮಾರಂಭವನ್ನು ಘೋಷಿಸಿದ್ದರು.
ಶಂಕುಸ್ಥಾಪನೆ ಸಮಾರಂಭಕ್ಕಾಗಿ, ಕಬೀರ್ ಅವರು ಡಿಸೆಂಬರ್ 6 ಅನ್ನು ಆಯ್ಕೆ ಮಾಡಿಕೊಂಡರು. ಏಕೆಂದರೆ ಇದು ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.
ಇಂದಿನ ಸಮಾರಂಭದಲ್ಲಿ ಆತಿಥ್ಯ ವಹಿಸುವವರಿಗೆ ಹಾಗೂ ಪಾಲ್ಗೊಳ್ಳುವವರಿಗೆ ʻಶಾಹಿ ಬಿರಿಯಾನಿʼ ತಯಾರಿಸಲಾಗಿದ್ದು, ಅದಕ್ಕಾಗಿ 7 ಕ್ಯಾಟರಿಂಗ್ಗಳಿಗೆ ನಿರ್ವಹಣೆ ವಹಿಸಲಾಗಿದೆ. ಅತಿಥಿಗಳಿಗಾಗಿ ಸುಮಾರು 40,000 ಪ್ಯಾಕೆಟ್ ಬಿರಿಯಾನಿ, ಸ್ಥಳೀಯ ನಿವಾಸಿಗಳಿಗೆ 20,000 ಪ್ಯಾಕೆಟ್ ಬಿರಿಯಾನಿ ಸಿದ್ಧಪಡಿಸಲಾಗಿದೆ. ಅದಕ್ಕಾಗಿ 30 ಲಕ್ಷ ರೂ. ಖರ್ಚು ಮಾಡಲಾಗಿದೆ. ಇನ್ನೂ ಇಡೀ ಕಾರ್ಯಕ್ರಮಕ್ಕೆ ಅಂದಾಜು 60 ರಿಂದ 70 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

