ಹೊಸದಿಗಂತ ಡಿಜಿಟಲ್ ಡೆಸ್ಕ್ :
ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಯುವತಿಯ ಅತ್ಯಾಚಾರದ ಕುರಿತು ವರದಿ ಮಾಡುತ್ತಿದ್ದಾಗ ಬಂಧಿತರಾಗಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಇಂದು ಬಿಡುಗಡೆ ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ಲಖನೌ ಜೈಲಿನಿಂದ ಅವರು ಬಿಡುಗಡೆಗೊಂಡರು. ಜಾಮೀನು ಸಿಕ್ಕ ಒಂದು ತಿಂಗಳ ಬಳಿಕ ಅವರು ಬಂಧಮುಕ್ತರಾಗಿದ್ದಾರೆ.
ಅವರ ಮೇಲಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪದ ಬಗ್ಗೆ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಾರ್ ಕೌನ್ಸಿಲ್ ಚುನಾವಣೆಯಲ್ಲಿ ನಿರತರಾಗಿದ್ದರಿಂದ ಜಾಮೀನು ಪ್ರಕ್ರಿಯೆ ವಿಳಂಬವಾಗಿತ್ತು.
“ಕಠಿಣ ಕಾನೂನುಗಳ ವಿರುದ್ಧ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ಜಾಮೀನು ಸಿಕ್ಕ ನಂತರವೂ ಅವರು ನನ್ನನ್ನು ಜೈಲಿನಲ್ಲಿಟ್ಟರು. 28 ತಿಂಗಳ ಸುದೀರ್ಘ ಹೋರಾಟದ ನಂತರ ಹೊರಬಂದಿದ್ದೇನೆ. ನಾನು ಜೈಲಿನಲ್ಲಿರುವುದರಿಂದ ಯಾರಿಗೆ ಲಾಭವಾಗಿದೆ ಎಂದು ನನಗೆ ತಿಳಿದಿಲ್ಲ. ಈ ಎರಡು ವರ್ಷಗಳು ತುಂಬಾ ಕಠಿಣವಾಗಿತ್ತು. ಆದರೆ ನಾನು ಎಂದಿಗೂ ಹೆದರಲಿಲ್ಲ, ”ಎಂದು ಅವರು ಲಕ್ನೋ ಜೈಲಿನಿಂದ ಬಿಡುಗಡೆಯಾದ ನಂತರ ಹೇಳಿದ್ದಾರೆ.