ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ ಬಿ.ಡಿ.‌ ಜಗದೀಶ್ ರೈ ಅವಿರೋಧ ಆಯ್ಕೆ

ಹೊಸದಿಗಂತ ವರದಿ,ಮಡಿಕೇರಿ :

ಕೊಡಗು ಜಿಲ್ಲಾ ಬಂಟರ ಸಂಘದ ಮಹಾಸಭೆ ಸಂಘದ ಪ್ರಭಾರ ಅಧ್ಯಕ್ಷ ವಿ. ರವೀಂದ್ರ ರೈ ಅಧ್ಯಕ್ಷತೆಯಲ್ಲಿ ಭಾನುವಾರ ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಡಿ. ಜಗದೀಶ್ ರೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲನಗರದ ಉದ್ಯಮಿ ವಿ. ರವೀಂದ್ರ ರೈ ಅವರು ಅವಿರೋಧ ಆಯ್ಕೆಯಾದರು.
ಸಭೆಯ ಆರಂಭದಲ್ಲಿ ಉಪಾಧ್ಯಕ್ಷ ಬಿ.ಕೆ.‌ರವೀಂದ್ರ ರೈ ಅವರು ಸಂಘ ಮತ್ತು ಟ್ರಸ್ಟ್‌ನ ಆಸ್ತಿಯ ಬಗ್ಗೆ ವಿವರಣೆ ನೀಡಿದರು. ಜಾಗದ ವಿಚಾರವಾಗಿ ಕೆಲವರು ದುರುದ್ದೇಶಪೂರಿತವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಜಾಗದ ಬಗೆಗಿನ ಎಲ್ಲಾ ನಿಖರ ದಾಖಲೆಗಳು ಸಂಘದ ಬಳಿ‌ ಇದ್ದು, ಯಾರು ಯಾವಾಗ ಬೇಕಾದರೂ ಪರಿಶೀಲಿಸಬಹುದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ರವೀಂದ್ರ ವಿ. ರೈ ಮಾತನಾಡಿ, ಹಲವು ವರ್ಷಗಳ ಬಳಿಕ ಎಲ್ಲರೂ ಒಟ್ಟು ಸೇರಿದ್ದೇವೆ. ಮಾಜಿ ಅಧ್ಯಕ್ಷರು, ಕಾರ್ಯದರ್ಶಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಲವೇ ಕೆಲವರು ಸೇರಿ ಸಂಘದ ಸದಸ್ಯರನ್ನು ಗಮನಕ್ಕೆ ತೆಗೆದುಕೊಳ್ಳದೆ ತಾವೇ ಸಂಘದ ಪದಾಧಿಕಾರಿಗಳು ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಈ ಹಿಂದೆ ಆಡಳಿತ ಮಂಡಳಿ ಸಭೆ ಕರೆಯುವುದಕ್ಕೂ ಆಸಕ್ತಿ ತೋರಿಸಿರಲಿಲ್ಲ. ಹಲವು ಬಾರಿ ಗಡುವು ನೀಡಿದರೂ ಸಭೆ ಕರೆಯಲಿಲ್ಲ. ಜನವರಿ 8ರಂದು ಔತಣಕೂಟದ ಹೆಸರಿನಲ್ಲಿ ಸಭೆ ನಡೆಸಿ ಘೋಷಣೆ ಮಾಡಿಕೊಂಡಿದ್ದಾರೆ. ಸಂಘದ ಪದಾಧಿಕಾರಿಗಳಿಗೂ ಮಾಹಿತಿ ನೀಡಲಿಲ್ಲ. ಈಗ ಸಮಾಜದವರ ವಿರುದ್ಧವೇ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಡಿ. ಜಗದೀಶ್ ರೈ ಮಾತನಾಡಿ, ಮುಂದಿನ ದಿನದಲ್ಲಿ ಸಂಘದಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಮುಂದಿನ ದಿನದಲ್ಲಿ ಸಮುದಾಯಕ್ಕೆ ಬೇಕಾದ ಅಗತ್ಯ ಕೆಲಸ ಕಾರ್ಯಗಳನ್ನು ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಮಾಡುವುದಾಗಿ ಹೇಳಿದರು.
ಸಮುದಾಯಕ್ಕೆ ಬಂಟರ ಭವನದ ಅಗತ್ಯತೆ ಇದೆ. ತನ್ನ ಆಡಳಿತಾವಧಿಯಲ್ಲಿ ಭವನ ನಿರ್ಮಾಣ ಮಾಡಿ ತೋರಿಸುವುದಾಗಿ ಭರವಸೆ ನೀಡಿದರು. ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ನಿರ್ದೇಶಕರನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿ ಜಗದೀಶ್ ರೈ ತಿಳಿಸಿದರು.
ಬಂಟರ ಸಂಘದ ಗಮನಕ್ಕೆ ತರದೆ ಸಂಘದ ಅಧ್ಯಕ್ಷ ಸ್ಥಾನದ ಸ್ವಯಂ ಘೋಷಣೆ ಮಾಡಿಕೊಂಡ ಮತ್ತು ಪದಾಧಿಕಾರಿಗಳ ಬಗ್ಗೆ ಮತ್ತು ಜನಾಂಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ವೀರಾಜಪೇಟೆಯ ರತ್ನಾಕರ ಶೆಟ್ಟಿ ಅವರನ್ನು ಸಭೆಯಲ್ಲಿದ್ದ ಸರ್ವ ಸದಸ್ಯರ ಒಕ್ಕೊರಲ ಆಗ್ರಹದ ಮೇರೆಗೆ ಜಿಲ್ಲಾ ಬಂಟರ ಸಂಘದಿಂದ ಅನಿರ್ದಿಷ್ಟಾವಧಿಗೆ ಉಚ್ಛಾಟಿಸಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಂಘದ ಬೆಳವಣಿಗೆ ಬಗ್ಗೆ ಹಲವರು ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯದರ್ಶಿ ಬಿ.ಸಿ. ಹರೀಶ್ ರೈ ವರದಿ ವಾಚಿಸಿದರು. ಖಜಾಂಚಿ ಬಿ.ಎನ್. ರತ್ನಾಕರ ರೈ ಆರ್ಥಿಕ ವರದಿ ಮಂಡಿಸಿದರು. ಗೌರವಾಧ್ಯಕ್ಷ ಬಿ.ಬಿ. ಐತಪ್ಪ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜನಾರ್ದನ ಶೆಟ್ಟಿ, ವೀರಾಜಪೇಟೆ ತಾಲೂಕು ಅಧ್ಯಕ್ಷ ದುಷ್ಯಂತ ರೈ, ಮಡಿಕೇರಿ ತಾಲೂಕು ಅಧ್ಯಕ್ಷ ರಮೇಶ್ ರೈ, ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ ರೈ, ಮಡಿಕೇರಿ ನಗರ ಮಹಿಳಾ ಘಟಕ‌ ಅಧ್ಯಕ್ಷೆ ಸೌಮ್ಯ ಶೆಟ್ಟಿ ಉಪಸ್ಥಿತರಿದ್ದು ನೂತನ ಸಮಿತಿಗೆ ಬೆಂಬಲ ವ್ಯಕ್ತಪಡಿಸಿದರು.
ಬಾಲಕೃಷ್ಣ ರೈ ಸ್ವಾಗತಿಸಿ, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ಹಿತಾ ಯೋಗೇಶ್ ಶೆಟ್ಟಿ ಪ್ರಾರ್ಥಿಸಿದರೆ, ಹರೀಶ್ ರೈ ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!