ಹೊಸದಿಗಂತ ವರದಿ ಬ್ಯಾಡಗಿ :
ಬ್ಯಾಡಗಿ ಕ್ಷೇತ್ರದ ವಿವಿಧ ಸರಕಾರಿ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಭಾಷಣದ ವೇಳೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿಯವರಿಗೆ ಮತ್ತೊಂದು ಬಾರಿ ಆಶೀರ್ವದಿಸಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರಿಂದ ಪಟ್ಟಣದ ವರ್ತಕರ ಭವನದಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮತ್ತು ಅವರ ಬೆಂಬಲಿಗರು ಸುದ್ದಿಗೋಷ್ಠಿ ಭಾನುವಾರ ನಡೆಸಿದರು.
ಈ ವೇಳೆ ಮಾತನಾಡಿದ ಸುರೇಶಗೌಡ ಪಾಟೀಲ, ಕ್ಷೇತ್ರದಲ್ಲಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ, ಅಭ್ಯರ್ಥಿ ಘೋಷಣೆಗೆ ಕೋರ್ ಕಮಿಟಿ ಹಾಗೂ ವರಿಷ್ಠರು ಸಹ ಇದ್ದಾರೆ. ಆದರೆ ಇದು ಯಾವದನ್ನು ಪರಿಗಣಿಸದೆ ಮುಖ್ಯ ಮಂತ್ರಿಗಳು ಹಾಲಿ ಶಾಸಕರನ್ನು ಮೊತ್ತೊಮ್ಮೆ ಆಶೀರ್ವದಿಸಿರಿ ಅಂತಾ ಹೇಳಿರುವದು ನ್ಯಾಯವೇ…?, ಇದಕ್ಕೆ ಮುಖ್ಯಮಂತ್ರಿಗಳೇ ಸ್ಪಷ್ಟಿಕರಣ ನೀಡುಬೇಕೆಂದು ಬೊಮ್ಮಾಯಿ ಯವರನ್ನು ಒತ್ತಾಯಿಸಿದರು.
ಕ್ಷೇತ್ರದಲ್ಲಿ ಯಾರ ಮೇಲೆ ಒಲವಿದೆ ಅನ್ನೂದಕ್ಕಿಂತ ನನ್ನ ಬಳಿ ಹಣ ಎಷ್ಟಿದೆ ಎಂದು ನಾಯಕರು ನೋಡುತ್ತಿದ್ದಾರೆ ಹೊರತು ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಶಾಸಕರು ಗೌರವ ನೀಡುತ್ತಿಲ್ಲ. ಅಭ್ಯರ್ಥಿ ಬದಲಾವಣೆ ಬಗ್ಗೆ ಬಿಜೆಪಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ನಮ್ಮ ಕಾರ್ಯಕರ್ತರ ಸಭೆ ನಡೆಸಿ, ಕಾರ್ಯಕರ್ತರ ನಿರ್ಧಾರದಂತೆ ಮುಂದುವರೆಯುತ್ತೇವೆ ಎಂದರು.
ಮುಖಂಡ ರಾಮಣ್ಣ ಉಕ್ಕುಂದ ಮಾತನಾಡಿ, ಕ್ಷೇತ್ರದಲ್ಲಿ ಯಾರು ಸಮರ್ಥರು ಇರುತ್ತಾರೋ ಅವರಿಗೆ ಪಕ್ಷದ ಹೈಕಮಾಂಡ್ ಟಿಕೇಟ್ ಕೊಡಲಿ. ಸಮರ್ಥವಾಗಿ ಜನಸೇವೆ ಮಾಡುವವರಿಗೆ ನಮ್ಮ ಬೆಂಬಲವಿದೆ. ಈಗಿನ ಶಾಸಕರನ್ನ ಹೊರತುಪಡಿಸಿ ಟಿಕೆಟ್ ನಿಡಿ ಎಂದು ಬಿಜೆಪಿ ವಶೀಷ್ಟರಿಗೆ ವಿನಂತಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಿರೂಪಾಕ್ಷಪ್ಪ ಕಡ್ಲಿ, ಮುರಿಗೆಪ್ಪ ಶೆಟ್ಟರ್, ಬಸವರಾಜ ಛತ್ರದ, ಬಾಲುಗೌಡ್ರ ಪಾಟೀಲ, ಮರಡೆಪ್ಪ ಹೇಡಿಯಾಲ, ಶಿವಯೋಗಿ ಶಿರೂರು, ಈರಣ್ಣ ಬಣಕಾರ, ಮಹದೇವಪ್ಪ ಶಿಡೇನೂರ, ಮಲ್ಲೇಶ ಬಣಕಾರ ಬಾಬಣ್ಣ ಕುಲ್ಕರ್ಣಿ, ರಾಮಣ್ಣ ಕೋಡಿಹಳ್ಳಿ, ಅರುಣ ಪಾಟೀಲ, ಹೇಮಂತ ಸರ್ವಂದ ಸೇರಿದಂತೆ ಇನ್ನಿತರರಿದ್ದರು.