ಹೊಸದಿಗಂತ ವರದಿ ಬೀದರ್:
ಜಿಲ್ಲೆಯನ್ನು ಸಂಪೂರ್ಣ ಅಪರಾಧ ಮುಕ್ತ ಜಿಲ್ಲೆಯಾಗಿಸಲು ಎಲ್ಲರೂ ಪೊಲೀಸರೊಂದಿಗೆ ಕೈಜೊಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಲಂಗೊಟಿ ಕರೆ ನೀಡಿದರು. ಸೋಮವಾರ ಬೀದರ ನಗರದ ಜಿಲ್ಲಾ ಪೊಲೀಸ್ ಪರೇಡ ಮೈದಾನದಲ್ಲಿ 75ನೇ ಸ್ವತಂತ್ರ್ಯೋತ್ಸವದ ನಿಮಿತ್ತ ಪೊಲೀಸ್ ಅಧಿಕಾರಿಗಳಿಗೆ ಪದಕ ವಿತರಿಸಿ ಮಾತನಾಡಿದರು.
ಬೀದರ ಜಿಲ್ಲೆ ಭೌಗೊಳಿಕವಾಗಿ ಕರ್ನಾಟಕದ ಕಿರೀಟ ಪ್ರಾಯವಾಗಿದ್ದು, ಇಲ್ಲಿ ಶರಣರು, ಸಂತರು, ಮಹಾತ್ಮರು ಹಾಗೂ ಸೂಫಿ ಸಂತರು ನಡೆದಾಡಿದ ಪುಣ್ಯ ಭೂಮಿ ಇದಾಗಿದ್ದು, ಇಲ್ಲಿ ನನಗೆ ಸೇವೆ ಮಾಡಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಹಾಗಾಗಿ ಈ ಕಲ್ಯಾಣ ಶರಣರ ನೆಲವನ್ನು ಅಪರಾಧ ಮುಕ್ತ ಪ್ರದೇಶವಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಪದಕ ವಿತರಿಸಲಾಯಿತು. ವಿಶೇಷವಾಗಿ ಶ್ವಾನದಳದಿಂದ ನಡೆದ ಅದ್ಬುತ ಪ್ರದರ್ಶನ ಮನಸೂರೆಗೊಂಡಿತ್ತು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಎಂಟು ತುಕಡಿಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗೌರವ ವಂದನೆ ಸ್ವೀಕರಿಸಿದರು.