ಹೊಸದಿಗಂತ ವರದಿ ಶಿರಸಿ :
ಪರೇಶ ಮೇಸ್ತಾ ಸಾವಿನ ಬಳಿಕ ಜಿಲ್ಲೆಯಲ್ಲಿ ನಡೆದಿದ್ದ ಹಿಂಸಾಚಾರದ ಕುರಿತಂತೆ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ರಾಜ್ಯ ಸರಕಾರ ಕ್ಯಾಬಿನೆಟ್ ನಲ್ಲಿ ನಿರ್ಧರಿಸಿದೆ.
ಇದರಿಂದಾಗಿ ಶಿರಸಿಯ 112, ಹೊನ್ನಾವರದ ಒಬ್ಬರು ಮತ್ತು ಕುಮಟಾದ ಒಬ್ಬರ ಮೇಲೆ ದಾಖಲಾಗಿದ್ದ ಪ್ರಕರಣ ವಾಪಸಾಗುವ ಸಾಧ್ಯತೆ ನಿಚ್ಚಳವಾಗಿದೆ.
ಈ ಪ್ರಕರಣವನ್ನು ಶಿರಸಿಯ ವಕೀಲ ಸದಾನಂದ ಭಟ್ ನ್ಯಾಯಾಲಯದಲ್ಲಿ ನಿರ್ವಹಿಸುತ್ತಿದ್ದರು. ಕಳೆದ
ಕೆಲ ತಿಂಗಳ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಪ್ರಕಣಗಳನ್ನು ವಾಪಸ್ ಪಡೆಯಲಾಗಿತ್ತು. ಇದರಲ್ಲಿ ಜಿಲ್ಲೆಯ 174 ಜನ ಆರೋಪ ಮುಕ್ತರಾಗಿ ನಿರಾಳರಾಗಿದ್ದರು. ಆ ಬಳಿಕ ಸಿಬಿಐ ವರದಿಯಲ್ಲಿ ಪರೇಶ ಮೇಸ್ತ ಸಹಜ ಸಾವು ಎಂದು ಮಾಹಿತಿ ನೀಡಿದ್ದರಿಂದ ಪ್ರಕರಣ ತಿರುವು ಪಡೆದುಕೊಂಡಿದೆ.
ಈ ಕುರಿತಂತೆ ಮಾತನಾಡಿರುವ ನ್ಯಾಯವಾದಿ ಸದಾನಂದ ಭಟ್, ಶಿರಸಿಯಲ್ಲಿ 112 ಜನರ ಮೇಲೆ ದಾಖಲಾಗಿದ್ದ ಪ್ರಕರಣ ವಾಪಸ್ ಪಡೆಯುವ ಬಗ್ಗೆ ವಿಶೇಷ ಯತ್ನ ನಡೆಸಲಾಗಿತ್ತು. ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸುತ್ತಿದ್ದೇವೆ ಎಂದಿದ್ದಾರೆ. ಈ ಕುರಿತಂತೆ ವಿಧಾನ ಸಭಾಸದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಿಂದಲೂ ಪ್ರಕಟಣೆ ಹೊರಡಿಸಲಾಗಿದೆ. ಕಾಗೇರಿಯವರು ಅಮಾಯಕರ ಮೇಲಿನ ಪ್ರಕರಣ ವಾಪಸ್ ಪಡೆಯುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರೊಂದಿಗೆ ಮಾತನಾಡಿದ ಫಲವಾಗಿ ಪ್ರಕರಣ ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.