ಹೊಸದಿಗಂತ ವರದಿ, ವಿಜಯಪುರ:
ಯಾರನ್ನೋ ಸೋಲಿಸಲು ನಾನು ಪಕ್ಷ ಕಟ್ಟಿಲ್ಲ. ಗೆಲ್ಲುವ ಕಡೆಗಳಲ್ಲಿ ಮಾತ್ರ ಹೆಜ್ಜೆ ಇಡುತ್ತಿದ್ದೇನೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಬಿಜೆಪಿ ಸೋಲಿಸಲು ಜನಾರ್ದನ ರೆಡ್ಡಿ ಹೊಸ ಪಕ್ಷ ವಿಚಾರ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲ್ಲುವ ಕಡೆಗಳಲ್ಲಿ ಮಾತ್ರ ಅಭ್ಯರ್ಥಿಗಳ ಘೋಷಣೆ ಮಾಡ್ತೀನಿ. ಯಾರನ್ನೋ ಸೋಲಿಸಲು ಅಲ್ಲ ಎಂದರು.
ಜನಾರ್ದನ ರೆಡ್ಡಿ ಕಾಂಗ್ರೆಸ್ ಬಿ ಟೀಂ ಆರೋಪ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಜನರಿಗೆ ಯಾರ ಮೇಲೆ ನಂಬಿಕೆ ಇದೆ ಅವರಿಗೆ ಮತ ಹಾಕುತ್ತಾರೆ ಎಂದರು.
ಜನಾರ್ದನ ರೆಡ್ಡಿ ವಿರುದ್ಧ ವಿಜಯೇಂದ್ರ ಕಣಕ್ಕಿಳಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಎದುರಾಳಿ ಯಾರು ಅನ್ನೋದನ್ನ ನಾನು ಯೋಚನೆ ಮಾಡೋನಲ್ಲ. ನನ್ನ ಕೆಲಸ, ನನ್ನ ಹೋರಾಟ ಇದ್ದೆ ಇರುತ್ತೆ ಎಂದರು.
30 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಆ ಭರವಸೆ ಬಂದಿದೆ. ಯಾವುದೇ ಕಾರಣಕ್ಕು ಬಿಜೆಪಿಗೆ ಮರಳಲ್ಲ. ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆಯೊಲ್ಲ. ಮುಂದೆ ಇಟ್ಟ ಹೆಜ್ಜೆ ಹಿಂದೆ ತೆಗೆಯುವವನು ಶೂರನು ಅಲ್ಲ, ಧೀರನು ಅಲ್ಲ. ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಬರಲ್ಲ ಎಂದರು.
ಶಾಸಕ ಮಾಡಾಳ್ ನಿವಾಸದ ಮೇಲೆ ಲೋಕಾ ದಾಳಿ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಮಾಡಾಳ್ ವಿಚಾರ ಏನಾಗಿದೆ ನಿಮಗೆಲ್ಲ ಗೊತ್ತೆ ಇದೆಯಲ್ಲ ಎಂದು ಸುಮ್ಮನಾದರು.
ದೇವರಹಿಪ್ಪರಗಿಯಿಂದ ರೆಡ್ಡಿ ಪತ್ನಿ ಸ್ಪರ್ಧಿಸ್ತಾರೆ ಎನ್ನುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಆ ರೀತಿಯ ಬೆಳವಣಿಗೆ ಇಲ್ಲ, ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇವಷ್ಟೆ. ಪಕ್ಷಕ್ಕಾಗಿ ಕೆಲಸ ಮಾಡತ್ತೀವಿ, ಫಲಿತಾಂಶ ದೇವರು ಹಾಗೂ ಜನರ ಕಯ್ಯಲ್ಲಿದೆ ಎಂದರು.