ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಜನರು ‘ರಾಜಕೀಯ ಬದಲಾವಣೆ’ಗಾಗಿ ಹಾತೊರೆಯುತ್ತಿದ್ದಾರೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಬಯಸುತ್ತಿರುವುದಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಸೋಮವಾರ ಹೇಳಿದ್ದಾರೆ.
ಪುಣೆಯಲ್ಲಿ ಮಾಧ್ಯವರನ್ನುದ್ದೇಶಿಸಿ ಮಾತನಾಡಿದ ಪವಾರ್, ‘ಬದಲಾವಣೆಯನ್ನು ಎದುರು ನೋಡುತ್ತಿರುವುದಾಗಿ ಜನರು ಹೇಳಿದ್ದಾರೆ. ಇದನ್ನು ಸಾಧಿಸಲು ವಿರೋಧ ಪಕ್ಷಗಳು ಒಂದಾಗಬೇಕು ಎಂದಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡು, ಸಾಕಷ್ಟು ಜನರನ್ನು ಭೇಟಿ ಮಾಡಿರುವುದಾಗಿ ತಿಳಿಸಿದ್ದಾರೆ.
28 ವರ್ಷಗಳಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಕಸ್ಬಾ ಪೇಟ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಾ ವಿಕಾಸ್ ಆಘಾಡಿ (ಎಂವಿಎ) ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸಿರುವ ಕಾಂಗ್ರೆಸ್ನ ರವೀಂದ್ರ ಧಂಗೇಕರ್ ಅವರನ್ನು ಇದೇ ವೇಳೆ ಭೇಟಿಯಾಗಿ ಮಾತುಕತೆ ನಡೆಸಿದರು.
ಉಪ ಚುನಾವಣೆ ಬಗ್ಗೆ ಮಾತನಾಡಿದ ಅವರು, ಧಂಗೇಕರ್ ಗೆಲ್ಲುತ್ತಾರೆ ಎಂಬ ವಿಶ್ವಾಸವಿರಲಿಲ್ಲ. ಬಿಜೆಪಿ ಮಾಜಿ ಶಾಸಕ ಗಿರಿಶ್ ಬಾಪತ್ ಅವರು ಈ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಅದರ ನಡುವೆಯೂ ಜನರು, ಎಂವಿಎ ಅಭ್ಯರ್ಥಿಯ ಕೆಲಸವನ್ನು ಗಮನಿಸಿದ್ದಾರೆ ಎಂದರು. ಹಾಗೆಯೇ, ಎಂವಿಎ ಮೈತ್ರಿಕೂಟವು ಮುಂಬರುವ ಚುನಾವಣೆಗಳಲ್ಲಿಯೂ ಒಂದಾಗಿ ಕಣಕ್ಕಿಳಿಯಲಿದೆ ಎಂದರು.