ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಚುನಾವಣೆ ಕಾವು ಹೆಚುತ್ತಿದ್ದು, ಮಹಾಭಾರತ (Mahabharata) ಶುರುವಾಗಿದೆ.ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಶಕುನಿ ಎಂದು ಕರೆದರೆ, ಸಿಎಂ ಬೊಮ್ಮಾಯಿ, ದುರ್ಯೋಧನ ಯಾರೆಂದು ನನಗೆ ಗೊತ್ತಿದೆ ಎಂದಿದ್ದಾರೆ.
ಹೊಸ ಮೀಸಲಾತಿ ನೀತಿಯ ವಿರುದ್ಧ ಅಭಿಪ್ರಾಯ ಹೇಳಲು ಆಯೋಜಿಸಿದ ಕಾಂಗ್ರೆಸ್ ಪಕ್ಷದ ದಿಢೀರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು, ʻʻಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕದ ಶಕುನಿ ಆಗಿದ್ದಾರೆ. ಮಹಾಭಾರತದಲ್ಲಿ ಶಕುನಿಯಂತೆ, ಕರ್ನಾಟಕದಲ್ಲಿ ಬೊಮ್ಮಾಯಿ ಶಕುನಿ. ಕರ್ನಾಟಕದ ಪಾಂಡವರನ್ನು ಶಕುನಿ ಉದ್ಧಾರ ಆಗಲು ಬಿಡುವುದಿಲ್ಲʼʼ ಎಂದು ಹೇಳಿದರು.
ಯಾವುದೇ ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ 90 ದಿನದಲ್ಲಿ ಮೂರು ನಿರ್ಧಾರ ಮಾಡಿದ್ದನ್ನು ನಾನು ಎಂದೂ ನೋಡಿಲ್ಲ, ಬೊಮ್ಮಾಯಿ ಅವರದ್ದು 420 ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸುರ್ಜೇವಾಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ʻʻನನಗೆ ಅವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ಕರ್ನಾಟಕದ ಜನತೆ ನನ್ನನ್ನು ಕಾಮನ್ ಮ್ಯಾನ್ ಅಂತಾ ಹೇಳಿದಾರೆ. ನಾನು ಕಾಮನ್ ಆಗಿಯೇ ಇರುತ್ತೇನೆ. ಯಾರು ಶಕುನಿ ಯಾರು ದುರ್ಯೋಧನ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ಜಾಸ್ತಿ ಮಾತನಾಡಲ್ಲ ಎಂದು ಹೇಳಿದರು.