ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಶ್ರೀರಾಮನ ಜನ್ಮದಿನ. ದೇಶಾದ್ಯಂತ ಇಂದು ಎಲ್ಲಾ ರಾಮನ ದೇವಸ್ಥಾನಗಳಲ್ಲಿ ರಾಮ ಜಪ-ತಪ, ಪೂಜಾ ವಿಧಿ-ವಿಧಾನಗಳು ಪ್ರಾರಂಭಗೊಂಡಿವೆ. ತಾರಕ ಮಂತ್ರಗಳು, ಶ್ರೀ ರಾಮ ನವಮಿ ಆಚರಣೆ ಯಾಕೆ ಮಾಡ್ತಾರೆ ಎಂಬುದನ್ನು ತಿಳಿಯೋಣ.
ಪ್ರತಿ ವರ್ಷ ಹಿಂದೂಗಳು ಆಚರಿಸುವ ಅತ್ಯಂತ ಮಂಗಳಕರ ಹಬ್ಬಗಳಲ್ಲಿ ಶ್ರೀರಾಮ ನವಮಿಯೂ ಒಂದು. ಇದು ವಿಷ್ಣುವಿನ ಏಳನೇ ಅವತಾರವೆಂದು ಹೇಳಲಾಗುವ ಶ್ರೀರಾಮನ ಜನ್ಮದಿನವನ್ನು ಸೂಚಿಸುತ್ತದೆ. ಶ್ರೀರಾಮನು ತ್ರೇತಾಯುಗದ ಚೈತ್ರ ಶುದ್ಧ ನವಮಿಯಂದು ಪುನರ್ವಸು ನಕ್ಷತ್ರದ ಕರ್ಕಾಟಕ ಲಗ್ನದ ಅಭಿಜಿತ್ ಮುಹೂರ್ತದಲ್ಲಿ ಜನಿಸಿದನೆಂದು ಪುರಾಣಗಳು ಹೇಳುತ್ತವೆ.
ಅದರಂತೆ ಪ್ರತಿ ವರ್ಷ ಚೈತ್ರ ಮಾಸದ ಅಮಾವಾಸ್ಯೆಯ ನಂತರ 9ನೇ ದಿನ ಬರುವ ನವಮಿಯನ್ನು ‘ಶ್ರೀರಾಮ ನವಮಿ’ ಎಂದು ಗುರುತಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಅಂತ್ಯವನ್ನೂ ಸೂಚಿಸುತ್ತದೆ.
ಹದಿನಾಲ್ಕು ವರ್ಷಗಳ ವನವಾಸದ ನಂತರ, ರಾವಣನನ್ನು ಕೊಂದು ಸೀತಾ ಸಮೇತ ಅಯೋಧ್ಯೆಗೆ ಮರಳಿದ ಶ್ರೀರಾಮನು ಚೈತ್ರ ಶುದ್ಧ ನವಮಿಯಂದು ಪಟ್ಟಾಭಿಷಿಕ್ತನಾದನು.
ಸೀತಾರಾಮರ ವಿವಾಹವೂ ಇಂದೇ ನಡೆಯಿತು ಎಂಬುದು ಭಕ್ತರ ನಂಬಿಕೆ. ಅದಕ್ಕಾಗಿಯೇ ಈ ಎಲ್ಲಾ ದೇವಾಲಯಗಳಲ್ಲೂ ಶ್ರೀರಾಮ ನವಮಿಯಂದು ಸೀತಾರಾಮರ ಕಲ್ಯಾಣೋತ್ಸವವನ್ನು ಆಚರಿಸಲಾಗುತ್ತದೆ. ಮತ್ತು ಸೀತಾರಾಮರನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಶ್ರೀರಾಮನವಮಿಯ ದಿನ ಸೀತಾರಾಮ, ಲಕ್ಷ್ಮಣ, ಭರತ, ಶತ್ರುಘ್ನ ಮತ್ತು ಆಂಜನೇಯನನ್ನು ಒಟ್ಟಿಗೆ ಪೂಜಿಸಲಾಗುತ್ತದೆ ಕೋಸಂಬರಿ ಮತ್ತು ಪಾನಕವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಭದ್ರಾಚಲಂನಲ್ಲಿ ಪ್ರತಿವಾರ ನಡೆಯುವ ಶ್ರೀ ಸೀತಾರಾಮ ಕಲ್ಯಾಣ ದರ್ಶನ ಪಡೆದವರ ಜನ್ಮ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.