ಹೊಸದಿಗಂತ ವರದಿ ತುಮಕೂರು :
ಸಿದ್ಧ ಗಂಗೆಯ ಲಿಂಗೈಕ್ಯ ಪೂಜ್ಯ ಡಾ.ಶಿವಕುಮಾರ ಮಹಾ ಸ್ವಾಮೀಜಿ ಅವರು ಭಾರತರತ್ನಕ್ಕೂ ಮಿಗಿಲಾದ ರತ್ನ. ಅವರಿಗೆ ಎಂದೋ ಭಾರತರತ್ನ ಬರಬೇಕಿತ್ತು. ಆದರೆ ಅವರನ್ನು ಸರ್ಕಾರ ಗುರುತಿಸದೇ ಹೋದದ್ದು ನಮ್ಮೆಲ್ಲರ, ಕರ್ನಾಟಕದ ದುರ್ದೈವ ಎಂದು ಕೆಎಲ್ಇ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜ್ಯ ಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಶನಿವಾರ ನಡೆದ ಡಾ. ಶ್ರೀ ಶ್ರೀ. ಶಿವಕುಮಾರ ಸ್ವಾಮೀಜಿ ಅವರ 116ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ದಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಅವರು ಮಾತನಾಡಿದರು.
ಡಾ. ಶಿವಕುಮಾರ ಸ್ವಾಮೀಜಿ ಅವರು ಭರತಖಂಡದ ಮಹಾಬೆಳಗು, ಜಾತಿ ಕುಲಮೀರಿದ ಮಹಾನ್ ಮಾನವತಾವಾದಿ ಮೌನ ದಾಸೋಹ ದಿಂದಲೇ ಸಾಮಾಜಿಕ ಕ್ರಾಂತಿ ಮಾಡಿ ಯುಗ ಪ್ರವರ್ತಕರೆನಿಸಿದವರು. ಇಂತಹ ಶ್ರೀ ಗಳ ಜನ್ಮ ಜಯಂತಿ ಸಂದರ್ಭದಲ್ಲಿ ನನ್ನನ್ನು ಗೌರವಿಸಿ ಆಶೀರ್ವದಿಸಿರುವುದು ಸಾಮಾಜಿಕವಾಗಿ ನನ್ನ ಜವಾಬ್ದಾರಿ ಹೆಚ್ಟಿಸಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ರಾಜ್ಯಕ್ಕೆ ವೀರಶೈವ ಮಠ ಮಾನ್ಯಗಳಿಗೆ ಕೊಟ್ಟಿರುವ ಕೊಡುಗೆ ಅಪಾರ. ಕರ್ನಾಟಕ ವನ್ನು ಶಿಕ್ಷಣ ಕಾಶಿಯಾಗಿಸಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹಾನಗಲ್ ಕುಮಾರಶಿವಯೋಗಿಗಳ ಕೃಪಾಶೀರ್ವಾದದಿಂದ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದರೆ ದಕ್ಷಿಣದಲ್ಲಿ ಸಿದ್ಧಗಂಗೆ, ಸುತ್ತೂರು ಇತರ ಮಠಗಳು ಶಿಕ್ಷಣ ದಾಸೋಹ ವನ್ನು ವರ್ಗರಹಿತ, ವರ್ಣರಹಿತವಾಗಿ ಸಮಾಜಕ್ಕೆ ನೀಡಿವೆ ಎಂದು ನುಡಿದರು.
ಕೆರಗೋಡಿ ರಂಗಾಪುರದ ಶ್ರೀ ಗಿರುಪರದೇಶಿ ಕೇಂದ್ರ ಸ್ವಾಮೀಜಿ, ಸಿದ್ಧಗಂಗೆಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಸುತ್ತೂರಿನ ಮಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸೇವಾ ಪಥವನ್ನು ಸ್ಮರಿಸಿ ಶ್ರೀಗಳ ಸೇವೆ ಸಂತರೆಲ್ಲರಿಗೂ ಮಾದರಿ ಎಂದರು.
ವಿವಿಧ ವಮಠದ ಶ್ರೀಗಳು, ಆಶಾಕೋರೆ, ಎಸ್ಐಟಿ ನಿರ್ದೇಶಕ ಡಾ. ಎಂ. ಎನ್. ಚನ್ನಬಸಪ್ಪ, ನಿವೃತ್ತ ಡಿಜಿಪಿ ರೇವಣಸಿದ್ದಯ್ಯ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ತುಮಕೂರು ವಿವಿ ಕುಲಪತಿ ಡಾ. ವೆಂಕಟೇಶ್ವರಲು, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಸ್ಪೂರ್ತಿ ಚಿದಾನಂದ್, ಎಸ್ಐಟಿ ಸಿಇಓ ಡಾ. ಶಿವಕುಮಾರ ಯ್ಯ, ಆಡಳಿತಾಧಿಕಾರಿ ಎಸ್. ವಿಶ್ವ ನಾಥಯ್ಯ, ಸಿದ್ಧ ಗಂಗಾ ಆಸ್ಪತ್ರೆ ನಿರ್ದೇಶಕ ಡಾಎಸ್. ಪರಮೇಶ್, ಜಿ. ಎಸ್. ರೇಣುಕಪ್ಪ, ದೀಪಕ್ ಮತ್ತಿತರರು ಹಾಜರಿದ್ದರು.