ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಗಣರಾಜ್ಯೋತ್ಸವದಿಂದ ಘೋಷಿಸಲಾದ ಪದ್ಮ ಪ್ರಶಸ್ತಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಮಾರ್ಚ್ 22 ರಂದು ಮೊದಲ ಹಂತದಲ್ಲಿ 54 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಇಂದು ಇನ್ನುಳಿದ 54 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕದ ಇಸ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಇಂದು ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾಹಿತಿ, ಕನ್ನಡದ ಪ್ರಸಿದ್ಧ ಕಾದಂಬರಿಕಾರ ಎಸ್ಎಲ್ ಬೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಉಮ್ಮತ್ತಾಟ್ ನೃತ್ಯ ಕಲಾವಿದೆ ಕೊಡಗಿನ ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಸಿರಿ ಧಾನ್ಯ ಬಳಕೆ ಕುರಿತು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾ ಖಾದರ್, ಬೀದರ್ನ ರಶೀದ್ ಅಹಮದ್ ಖಾತ್ರಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ಒಟ್ಟು 8 ಮಂದಿ ಪದ್ಮ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೊದಲ ಹಂತದ ಪ್ರಶಸ್ತಿ ಪ್ರದಾನದಲ್ಲಿ ಹಿರಿಯ ರಾಜಕಾರಣಿ ಎಂ.ಎಮ್ ಕೃಷ್ಣ ಪ್ರಶಸ್ತಿ ಸ್ವೀಕರಿಸಿದ್ದರು.
ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಅವರಿಗೆ ಮರಣೋತ್ತರ ವಿಭೂಷಣ ಘೋಷಣೆ ಮಾಡಲಾಗಿತ್ತು. ಇಂದು ಮುಲಾಯಂ ಪುತ್ರ ಅಖಿಲೇಶ್ ಯಾದವ್ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು. ನಾಟು ನಾಟು ಹಾಡಿನ ಮೂಲಕ ಅದ್ಭುತ ಸಂಗೀತ ಸಾಮ್ರಾಜ್ಯ ಸೃಷ್ಟಿಸಿದ ಎಂಎಂ ಕೀರವಾಣಿ ಇಂದು ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದರು.