ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ ವೃತ್ತಿಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣದಿಂದಲೇ ಹೆಚ್ಚು ಸುದ್ದಿ ಕೇಂದ್ರದಲ್ಲಿರುತ್ತಾರೆ. ಪತ್ನಿ ಐಶ್ವರ್ಯಾ ರೈ ಬಚ್ಚನ್ ಅವರೊಂದಿಗಿನ ವಿಚ್ಛೇದನದ ಊಹಾಪೋಹಗಳು ಹಬ್ಬಿದ್ದ ಸಂದರ್ಭದಲ್ಲಿ, ಅವರ ಹೆಸರು ನಟಿ ನಿಮ್ರತ್ ಕೌರ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ಈ ಇಬ್ಬರೂ ‘ದಾಸವಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
ಅಭಿಷೇಕ್ ಮತ್ತು ನಿಮ್ರತ್ ನಡುವೆ ವಿವಾಹೇತರ ಸಂಬಂಧವಿದೆ ಎಂಬ ಬಲವಾದ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದವು. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಅಭಿಷೇಕ್, ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ನಿಮ್ರತ್ ಕೌರ್ ಅವರನ್ನು ನೇರವಾಗಿ ಹೆಸರಿಸದಿದ್ದರೂ, ಅಂತಹ ಎಲ್ಲಾ ವದಂತಿಗಳು ಮತ್ತು ನಕಾರಾತ್ಮಕ ಸುದ್ದಿ ಪ್ರಸಾರವು ತಮ್ಮ ಕುಟುಂಬಕ್ಕೆ ತಂದ ಸಮಸ್ಯೆಯ ಬಗ್ಗೆ ಅವರು ಮಾತನಾಡಿದರು.
“ತಪ್ಪು ಅಥವಾ ಸುಳ್ಳು ಮಾಹಿತಿಯನ್ನು ಹರಡುತ್ತಿರುವ ವ್ಯಕ್ತಿಗೆ ಅದನ್ನು ಸ್ಪಷ್ಟಪಡಿಸುವ ಅಥವಾ ಸರಿಪಡಿಸುವ ಆಸಕ್ತಿ ಇರುವುದಿಲ್ಲ,” ಎಂದು ಅಭಿಷೇಕ್ ತಮ್ಮ ನೋವನ್ನು ಹಂಚಿಕೊಂಡರು. ಆರಂಭದಲ್ಲಿ ಇಂತಹ ಸುದ್ದಿಗಳನ್ನು ನಿರ್ಲಕ್ಷಿಸುತ್ತಿದ್ದ ಅವರು, ಈಗಿನ ಪರಿಸ್ಥಿತಿ ವಿಭಿನ್ನವಾಗಿದೆ ಎಂದು ತಿಳಿಸಿದರು.
“ಮೊದಲು, ನನ್ನ ಬಗ್ಗೆ ಹೇಳಲಾದ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಆದರೆ ಇಂದು ನನಗೆ ಒಂದು ಕುಟುಂಬವಿದೆ. ಹೀಗಾಗಿ ಈ ಸುದ್ದಿಗಳು ತುಂಬಾ ಅಸಮಾಧಾನವನ್ನುಂಟುಮಾಡುತ್ತದೆ. ನಾನು ಕೆಲವು ಸ್ಪಷ್ಟೀಕರಣಗಳನ್ನು ನೀಡಿದ್ದರೂ, ಜನರು ಅದನ್ನು ವಿರುದ್ಧ ರೀತಿಯಲ್ಲಿ ಅರ್ಥೈಸುತ್ತಾರೆ. ಏಕೆಂದರೆ ನಕಾರಾತ್ಮಕ ಸುದ್ದಿಗಳು ಮಾರಾಟವಾಗುತ್ತವೆ,” ಎಂದು ಅಭಿಷೇಕ್ ಹೇಳಿದ್ದಾರೆ.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀವು ನನ್ನ ಸ್ಥಾನದಲ್ಲಿಲ್ಲ. ನೀವು ನನ್ನ ಜೀವನವನ್ನು ನಡೆಸುತ್ತಿಲ್ಲ. ನಾನು ಯಾರಿಗೆ ಜವಾಬ್ದಾರನಾಗಿರುತ್ತೇನೆಯೋ ಅವರಿಗೆ ನೀವು ಜವಾಬ್ದಾರರಲ್ಲ,” ಎಂದು ಖಾರವಾಗಿ ನುಡಿದರು.
ಇಂತಹ ನಕಾರಾತ್ಮಕತೆಯನ್ನು ಹರಡುವವರ ಬಗ್ಗೆ ಮಾತನಾಡಿದ ಜೂನಿಯರ್ ಬಚ್ಚನ್, “ಅವರು ತಮ್ಮ ಆತ್ಮಸಾಕ್ಷಿಯೊಂದಿಗೆ ಬದುಕಬೇಕು. ಅವರು ತಮ್ಮ ಆತ್ಮಸಾಕ್ಷಿಯೊಂದಿಗೆ ವರ್ತಿಸಬೇಕು ಮತ್ತು ತಮ್ಮ ಸೃಷ್ಟಿಕರ್ತನಿಗೆ ಉತ್ತರಿಸಬೇಕು,” ಎಂದು ಹೇಳಿದ್ದಾರೆ.
ಇದು ಕೇವಲ ತಮ್ಮ ವೈಯಕ್ತಿಕ ವಿಚಾರವಲ್ಲ ಎಂದು ಸ್ಪಷ್ಟಪಡಿಸಿದ ಅವರು, “ನೋಡಿ.. ಇದು ನನ್ನ ಬಗ್ಗೆ ಮಾತ್ರವಲ್ಲ. ಇದು ನನ್ನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇಲ್ಲಿ ಎಷ್ಟು ಕಠಿಣ ಪರಿಸ್ಥಿತಿ ಇದೆ ಎಂದು ನನಗೆ ತಿಳಿದಿದೆ. ಕುಟುಂಬಗಳು ಭಾಗಿಯಾಗಿವೆ. ಟ್ರೋಲಿಂಗ್ನ ಈ ಹೊಸ ಪ್ರವೃತ್ತಿಗೆ ನಾನು ನಿಮಗೆ ಉತ್ತಮ ಉದಾಹರಣೆಯನ್ನು ನೀಡಬಲ್ಲೆ,” ಎಂದರು.

