ಹೊಸದಿಗಂತ ವರದಿ ಶಿವಮೊಗ್ಗ:
ಬಜರಂಗದಳದ ನಿಷೇಧ ಪ್ರಸ್ತಾವದ ಮೂಲಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಣ್ಣ ಕಪ್ಪು ಚುಕ್ಕೆ ಆಗಿದೆ ಎಂಬ ಅಭಿಪ್ರಾಯ ಗಮನಕ್ಕೆ ಬಂದಿದ್ದರೂ, ಅದರಿಂದ ಕಾಂಗ್ರೆಸ್ ಮತಗಳಿಗೆ ಯಾವುದೇ ದಕ್ಕೆ ಇಲ್ಲ ಎಂದು ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧುಬಂಗಾರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿ ಮೂಡಿಸುವ ಬಜರಂಗದಳದಂತಹ ಸಂಘಟನೆ ನಿಷೇಧಿಸುವುದಾಗಿ ಹೇಳಿರುವುದು ಎಲ್ಲರೂ ಕಪ್ಪು ಚುಕ್ಕೆ ಎಂದು ಹೇಳುತ್ತಿದ್ದಾರೆ. ಆದರೆ ಅದರಿಂದ ಯಾವುದೆ ಹಾನಿ ಇಲ್ಲ.
ಈ ಹಿಂದಿನ ಪರೇಶ್ ಮೆಸ್ತಾ ಸಾವು ಗಲಾಟೆಯಿಂದ ಆಗಿದ್ದಲ್ಲ ಎಂದು ಸಿಬಿಐ ಹೇಳಿದೆ. ಇದನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವ ಮೂಲಕ ಹಿಂದು ಸಂಘಟನೆಗಳ ಮೇಲೆ ಪರೋಕ್ಷವಾಗಿ ಆಕ್ಷೇಪ ಹೊರೆಸಿದರು.
ಪ್ರಣಾಳಿಕೆಯಲ್ಲಿ ಈ ಪದ ಬಳಸಿರುವುದಕ್ಕೆ ಬದ್ಧವಾಗಿದ್ದು, ಅದರಲ್ಲಿರುವ ಎಲ್ಲಾ ಅಂಶಗಳನ್ನು ಜಾರಿಗೊಳಿಸಲಾಗುತ್ತದೆ. ರಾಜ್ಯ ಹಾಗೂ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯಲಾಗುತ್ತದೆ ಎಂದರು.