ಹೊಸ ದಿಗಂತ ಡಿಜಿಟಲ್ ಡೆಸ್ಕ್
ಜಿ.ಪಂ.ಮಾಜಿ ಸದಸ್ಯ, ಅಜ್ಜಾವರ ಗ್ರಾಮದ ಬಿಜೆಪಿ ಮುಖಂಡ ನವೀನ್ ಕುಮಾರ್ ರೈ ಮೇನಾಲ ಅವರು ಪಯಸ್ವಿನಿ ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ತುದಿಯಡ್ಕ ಬಳಿ ಪಯಸ್ವಿನಿ ನದಿಯ ಬದಿಯಲ್ಲು ಅವರ ತೋಟಕ್ಕೆ ನೀರು ಸರಬರಾಜು ಮಾಡುವ ಪಂಪ್ ಇದ್ದು ಅದರ ಪುಟ್ ವಾಲ್ವ್ ರಿಪೇರಿ ಮಾಡಲೆಂದು ಏಕಾಂಗಿಯಾಗಿ ಹೋಗಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಅವರು ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಮನೆಯವರು ಫೋನ್ ಮಾಡಿದರೂ ಫೋನ್ ಸ್ವೀಕರಿಸದಿದ್ದಾಗ ಕೆಲಸದಾಳು ಅವರನ್ನು ಹುಡುಕಿಕೊಂಡು ನದಿಯ ಬಳಿ ಬಂದರೆಂದೂ ಅಲ್ಲಿ ದಡದಲ್ಲಿ ಅವರ ಬಟ್ಟೆ ಇರುವುದನದನು ಕಂಡು ಸಂದೇಹದಿಂದ ಇತರರಿಗೆ ಮಾಹಿತಿ ನೀಡಿ ಬಳಿಕ ನೀರಿನಲ್ಲಿ ಇಳಿದು ಹುಡುಕಿದಾಗ ಅವರ ಮೃತದೇಹ ಪತ್ತೆಯಾಗಿದೆ.
ಆರು ವರ್ಷಗಳ ಹಿಂದೆ ಅಜ್ಜಾವರ ಜಾಲ್ಸೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಆ ಸಂದರ್ಭದಲ್ಲಿ ತನ್ನ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದ ನವೀನ್ ಕುಮಾರ್ ರೈ ಮೇನಾಲ, ಬಿಜೆಪಿಯ ಪ್ರಭಾವೀ ಮುಖಂಡರಾಗಿದ್ದರು. ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಅವರು ಜನಾನುರಾಗಿಯಾಗಿದ್ದರು.