ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡ್ಲಿ ವಿಚಾರಕ್ಕಾಗಿ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯಗೊಂಡ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುರುವಳ್ಳಿ ಎಂಬಲ್ಲಿ ನಡೆದಿದೆ.
ಕುರುವಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ವಿಶ್ವಕರ್ಮ ಸಮುದಾಯ ಭವನದಲ್ಲಿ ಇಡ್ಲಿ ತಿನ್ನುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಾವಣಗೆರೆಯ ಇಬ್ಬರು ಕಟ್ಟಡ ಕಾರ್ಮಿಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ದಾವಣಗೆರೆ ನಗರದ ನಿವಾಸಿಗಳಾದ ಬೀರೇಶ್ (35) ಮತ್ತು ಮಂಜಪ್ಪ (46) ಮೃತ ದುರ್ದೈವಿಗಳು. ಕೊಲೆ ಆರೋಪಿ ರಾಜಣ್ಣನನ್ನು (58) ಬಂಧಿಸಲಾಗಿದೆ.
ರಾಜಣ್ಣ ಎಂಬಾತ ಬೆಳಿಗ್ಗೆ ಐವರು ಕೆಲಸಗಾರರಿಗೆ ಇಡ್ಲಿ ತಯಾರಿಸಿದ್ದರು. ರಾತ್ರಿ ಊಟಕ್ಕೂ ಅದನ್ನೇ ಸೇವಿಸುವಂತೆ ಹೇಳಿದಾಗ ಕಾರ್ಮಿಕರು ತಗಾದೆ ತೆಗೆದಿದ್ದಾರೆ. ನಂತರ ಮೂವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿತ್ತು. ಇದರಿಂದ ಕೋಪಗೊಂಡ ರಾಜಣ್ಣ ರಾತ್ರಿ ಊಟ ಮುಗಿಸಿ ಮಲಗಿದ್ದ ಬೀರೇಶ್ ಮತ್ತು ಮಂಜುನಾಥ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.