ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ಪುಷ್ಪ 2 ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈಗಾಗಲೇ ಮೂರನೇ ಶೆಡ್ಯೂಲ್ ಮುಗಿದಿದೆ ಎಂಬುದು ಲೇಟೆಸ್ಟ್ ಮಾಹಿತಿ. ಪುಷ್ಪ 2 ಚಿತ್ರೀಕರಣ ಮುಗಿಸಿ ಬರುತ್ತಿದ್ದ ಕಲಾವಿದರಿಗೆ ರಸ್ತೆ ಅಪಘಾತ ಸಂಭವಿಸಿದೆ.
ಇಂದು ಮುಂಜಾನೆ ಪುಷ್ಪ 2 ಚಿತ್ರದಲ್ಲಿ ನಟಿಸಿರುವ ಹಲವು ಕಲಾವಿದರು ಶೂಟಿಂಗ್ ಮುಗಿಸಿಕೊಂಡು ಖಾಸಗಿ ಬಸ್ ನಲ್ಲಿ ಹೈದರಾಬಾದ್ ಗೆ ಬರುತ್ತಿದ್ದಾರೆ. ಈ ಖಾಸಗಿ ಬಸ್ ಹೈದರಾಬಾದ್-ವಿಜಯವಾಡ ಹೆದ್ದಾರಿಯಲ್ಲಿ ನಾರ್ಕೆಟ್ಪಲ್ಲಿ ಹೊರವಲಯದಲ್ಲಿ ನಿಂತಿದ್ದ ಆರ್ಟಿಸಿ ಬಸ್ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಬಸ್ಸಿನ ಭಾಗಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಗೊಂಡ ಕಲಾವಿದರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ರಸ್ತೆ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ದಟ್ಟಣೆ ತೆರವುಗೊಳಿಸಿ ತನಿಖೆ ನಡೆಸುತ್ತಿದ್ದಾರೆ. ಕಲಾವಿದರಿದ್ದ ಬಸ್ ಅಪಘಾತಕ್ಕೀಡಾಗಿ ಇಬ್ಬರಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಪುಷ್ಪ ಚಿತ್ರತಂಡ ಗೊಂದಲಕ್ಕೀಡಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.