ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ವಿಶ್ವವೇ ಬೆಚ್ಚಿಬಿದ್ದಿದೆ. 260 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ರಾಷ್ಟ್ರಗಳ ಮುಖಂಡರು ಒಡಿಶಾ ರೈಲು ಅಪಘಾತದ ಬಗ್ಗೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಪೆನ್ನಿ ವಾಂಗ್ ಟ್ವೀಟ್ ಮಾಡಿದ್ದು, ಇದೊಂದು ಆಘಾತಕಾರಿ ಘಟನೆ, ಈ ಘಟನೆಯಿಂದ ಮನಸ್ಸಿಗೆ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.
ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಟ್ವೀಟ್ ಮಾಡಿದ್ದು, ಒಡಿಶಾ ಅಪಘಾತದ ಬಗ್ಗೆ ಓದಿದೆ, ಮನಸ್ಸಿಗೆ ತೀವ್ರ ದುಃಖವಾಗಿದೆ. ಅಪಘಾತದಲ್ಲಿ ಗಾಯಗೊಂಡ ಎಲ್ಲರೂ ಶೀಘ್ರ ಗುಣಮುಖರಾಗಲಿ ಎಂದಿದ್ದಾರೆ.
ತೈವಾನ್ ಅಧ್ಯಕ್ಷ ತ್ಸೆ ಇಂಗ್ ವೆನ್ ಟ್ವೀಟ್ ಮಾಡಿದ್ದು, ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ, ಅವರ ಕುಟುಂಬಗಳಿಗೆ ಸಾವಿನ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದಿದ್ದಾರೆ.
ಕೆನಡಾ ಪಿಎಂ ಜಸ್ಟಿನ್ ಟ್ರುಡೋ ಟ್ವೀಟ್ ಮಾಡಿದ್ದು, ಎಷ್ಟೊಂದು ಜೀವಹಾನಿಯಾಗಿದೆ, ಈ ಘಟನೆ ಹೃದಯ ವಿದ್ರಾವಕ. ಅಪಘಾತದ ವರದಿ ಹಾಗೂ ಚಿತ್ರಗಳನ್ನು ನೋಡಿ ಮನಸ್ಸು ಕಲುಕಿದೆ. ಕೆನಡಿಯನ್ನರು ಭಾರತೀಯರ ಜೊತೆಗೆ ಇದ್ದಾರೆ ಎಂದಿದ್ದಾರೆ.