ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದಲ್ಲಿ ರೈಲು ದುರಂತವನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ದೃಷ್ಟಿಯಲ್ಲಿ ಸುಳ್ಳು ಆಪಾದನೆ ಮಾಡಿದ್ದ ಕಾಂಗ್ರೆಸ್ಗೆ ತ್ರೀವ ಮುಖಭಂಗವಾಗಿದೆ.
ಒಡಿಶಾದ ದುರಂತದ ಬಳಿಕ ರೈಲು ಪ್ರಯಾಣ ಅಸುರಕ್ಷಿತ ಎನ್ನುವ ಭಾವನೆ ಜನರಲ್ಲಿ ಮೂಡಿದ್ದು, ಇದರಿಂದ ರೈಲ್ವೆ ಟಿಕೆಟ್ ಕ್ಯಾನ್ಸಲೇಷನ್ನಲ್ಲಿ ದೊಡ್ಡ ಪ್ರಮಾಣದ ಏರಿಕೆಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು. ಈ ಟ್ವೀಟ್ ಗೆ ಭಾರತೀಯ ರೈಲ್ವೆಯ ಟಿಕೆಟ್ ಮ್ಯಾನೇಜಿಂಗ್ನ ಏಕೈಕ ವೆಬ್ಸೈಟ್ ಆಗಿರುವ ಐಆರ್ಸಿಟಿಸಿ (ಇಂಡಿಯನ್ ರೈಲ್ವೇಸ್ ಕೇಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್) ತಿರುಗೇಟು ನೀಡಿದೆ.
ಈ ದುರಂತ ಬಳಿಕ ದೇಶದಲ್ಲಿ ರೈಲ್ವೆಯ ಟಿಕೆಟ್ ರದ್ದತಿ ಪ್ರಮಾಣ ಏರಿಕೆಯಾಗಿಲ್ಲ. ಬದಲಾಗಿ ಇಳಿಕೆಯಾಗಿದೆ ಎಂದಿರುವ ಐಆರ್ಸಿಟಿಸಿ ಎಷ್ಟು ಪ್ರಮಾಣದ ಟಿಕೆಟ್ ರದ್ದತಿ ಇಳಿಕೆಯಾಗಿದೆ ಎನ್ನುವ ಮಾಹಿತಿಯನ್ನೂ ಟ್ವೀಟ್ನಲ್ಲಿ ನೀಡಿದೆ.
ಕಾಂಗ್ರೆಸ್ ಪಕ್ಷ ತನ್ನ ಟ್ವೀಟ್ನಲ್ಲಿ, ‘ಇಂತಹ ರೈಲು ಅಪಘಾತ ಹಿಂದೆಂದೂ ಸಂಭವಿಸಿರಲಿಲ್ಲ. ನೂರಾರು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಘಟನೆ ಎಲ್ಲರಿಗೂ ನೋವುಂಟು ಮಾಡಿದೆ. ಅಪಘಾತದ ನಂತರ ಸಾವಿರಾರು ಜನರು ತಮ್ಮ ಟಿಕೆಟ್ಗಳನ್ನು ರದ್ದುಗೊಳಿಸಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವುದು ಇನ್ನು ಮುಂದೆ ಸುರಕ್ಷಿತವಲ್ಲ ಎಂದು ಅವರು ಭಾವಿಸಿದ್ದಾರೆ’ ಎಂದು ಬರೆದುಕೊಂಡಿತ್ತು.
ಕಾಂಗ್ರೆಸ್ ಹೇಳಿಕೆಯನ್ನು ತಿರಸ್ಕರಿಸಿದ ಐಆರ್ಸಿಟಿಸಿ, ಕಾಂಗ್ರೆಸ್ ತನ್ನ ಲೆಕ್ಕಾಚಾರವನ್ನು ತಪ್ಪಾಗಿ ಮಾಡಿಕೊಂಡಿದೆ. ರೈಲ್ವೆ ಟಿಕೆಟ್ ರದ್ದತಿ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಆದರೆ, ಮತ್ತಷ್ಟು ಕಡಿಮೆಯಾಗಿದೆ. 2023ರ ಜೂನ್ 1 ರಂದು ಜನ 7.7 ಲಕ್ಷ ಟಿಕೆಟ್ಗಳನ್ನು ರದ್ದು ಮಾಡಿದ್ದರೆ, ಅದೇ 2023ರ ಜೂನ್ 3 ರಂದು ಈ ಪ್ರಮಾಣ 7.5 ಲಕ್ಷಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದೆ.