ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಸರಕಾರದಲ್ಲಿ ಮತ್ತೊಂದು ವಿಕೆಟ್ ಪತನವಾಗಿದ್ದು, ಹಿಂದೂಸ್ತಾನಿ ಅವಾಮ್ ಮೋರ್ಚಾ (Hindustani Awam Morcha) ನಾಯಕ ಸಂತೋಷ್ ಕುಮಾರ್ ಸುಮನ್ (Santosh Kumar Suman) ಅವರು ತಮ್ಮ ಮಂತ್ರಿ ಹುದ್ದೆಗೆ ರಾಜೀನಾಮೆ (resign) ನೀಡಿದ್ದಾರೆ.
ನಿತೀಶ್ ಕುಮಾರ್ ಸಂಪುಟದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಸಂತೋಷ್ ಕುಮಾರ್ ಸುಮನ್ ಅವರು.
ನಿತೀಶ್ ಕುಮಾರ್ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷವನ್ನು ಜೆಡಿಯುನಲ್ಲಿ ವಿಲೀನ ಮಾಡುವಂತೆ ತಮ್ಮ ತಂದೆ ಜಿತನ್ ರಾಮ್ ಮಾಂಜ್ಹಿ ಅವರಿಗೆ ಒತ್ತಡ ಹಾಕುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ತಾವು ಸಚಿವ ಸ್ಥಾನ ತೊರೆದರುವುದಾಗಿ ಹೇಳಿದ್ದಾರೆ.
ಸುಮನ್ ರಾಜೀನಾಮೆಯೊಂದಿಗೆ ಬಿಹಾರ ಮಹಾಮೈತ್ರಿಯಲ್ಲಿ (Mahagathbandhan) ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಹೊರಬಿದ್ದಿದೆ.
ಇನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಕನಿಷ್ಠ 5 ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಜ್ಹಿ ಅವರು ಆಗ್ರಹಿಸಿದ್ದರು. ಬಿಹಾರದಲ್ಲಿ ಅಸ್ತಿತ್ವದಲ್ಲಿ ಮಹಾಮೈತ್ರಿ ಸರ್ಕಾರದಲ್ಲಿ ಮಾಂಜ್ಹಿ ಅವರ ಪಕ್ಷವು ಕಿರಿಯ ಪಾಲುದಾರ ಪಕ್ಷವಾಗಿದೆ. ಈಗ ರಾಜೀನಾಮೆ ನೀಡಿರುವ ಸಂತೋಷ್ ಕುಮಾರ್ ಸುಮನ್ ಅವರು ಹಿಂದೂಸ್ತಾನ್ ಅವಾಮಿ ಮೋರ್ಚಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಕಳೆದ ವಾರವಷ್ಟೇ ಅವರು ಐದಕ್ಕಿಂತ ಕಡಿಮೆ ನೀಡಿದರೆ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಹಿಂದೂಸ್ತಾನ್ ಅವಾಮಿ ಮೋರ್ಚಾ ಬಿಹಾರದ ಪ್ರಾದೇಶಿಕ ಪಕ್ಷವಾಗಿದೆ. ಮಾಜಿ ಸಿಎಂ ಜಿತನ್ ರಾಮ್ ಮಾಂಜ್ಹಿ ಅವರು 2015ರಲ್ಲಿ ಈ ಪಕ್ಷವನ್ನು ಆರಂಭಿಸಿದರು. ಬಿಹಾರ ವಿಧಾನಸಭೆಯಲ್ಲಿ ಜಿತನ್ ಅವರ ಪಕ್ಷವು ಒಟ್ಟು ನಾಲ್ಕು ಸ್ಥಾನಗಳನ್ನು ಹೊಂದಿದೆ.