ತುಂಗಭದ್ರ ಒಡಲು ಖಾಲಿ – ಡೆಡ್ ಸ್ಟೋರೇಜ್‌ಗೆ ತಲುಪಿದ ನೀರಿನ ಮಟ್ಟ

– ಮಂಜುನಾಥ ಗಂಗಾವತಿ

ಕೊಪ್ಪಳ: ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್‌ಗೆ ತಲುಪಿದೆ. ಜಲಾಶಯದ ಒಡಲಾಳ ಖಾಲಿಯಾಗುತ್ತಿದ್ದು, ಅಪಾಯದ ಹಂತ ತಲುಪಿದೆ.

ಕ.ಕ.ಭಾಗದ ಕೊಪ್ಪಳ, ಬಳ್ಳಾರಿ, ವಿಜಯನಗರ, ರಾಯಚೂರು ಜಿಲ್ಲೆಯ ಜಮೀನುಗಳಿಗೆ ನೀರುಣಿಸುವ ತುಂಗಭದ್ರಾ ಜಲಾಶಯದಲ್ಲಿ ಇದೀಗ ಕೇವಲ 5.13 ಟಿಎಂಸಿ ನೀರು ಮಾತ್ರವಿದೆ. ಇನ್ನೆರಡು ವಾರದಲ್ಲಿ ಮಳೆಯಾಗದಿದ್ದರೆ, ಎಲ್ಲ ಜಿಲ್ಲೆಗಳಿಗೂ ನೀರಿನ ಹಾಹಾಕಾರ ಶುರುವಾಗಲಿದೆ.

ರಾಜ್ಯದ ನಾನಾ ಕಡೆ ಮಳೆಯಾಗಿರುವುದು ಎಲ್ಲರಿಗೂ ತಿಳಿದದ್ದೇ. ಅಲ್ಲಿ ಮಳೆಯಾಗುತ್ತದೆ, ಇಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ಹೊರಡಿಸುತ್ತಿರುವುದನ್ನು ನೋಡಿದ್ದೇವೆ. ಆದರೆ ವರುಣ ದೇವನ ಕೃಪೆ ಕ.ಕ.ಭಾಗದಲ್ಲಿ ಆಗುತ್ತಿಲ್ಲ. ಕಳೆದ ವರ್ಷ ಈ ಹೊತ್ತಿಗೆ ಜಲಾಶಯದಲ್ಲಿ 35 ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ಬಾರಿ 5 ಟಿಎಂಸಿ ನೀರು ಸಂಗ್ರಹವಿದೆ. ತುಂಗಭದ್ರ ಜಲಾಶಯಕ್ಕೆ ಒಟ್ಟು 105 ಟಿಎಂಸಿ ಸಂಗ್ರಹ ಮಾಡುವ ಸಾಮರ್ಥ್ಯವಿದೆ. ಆದರೆ ಈ ಬಾರಿ ಕೇವಲ 5 ಟಿಎಂಸಿವರೆಗೆ ಮಾತ್ರವೇ ಸಂಗ್ರಹವಾಗಿ ಭಯದ ವಾತಾವರಣ ಸೃಷ್ಟಿಸಿದೆ.

ಕುಡಿಯುವ ನೀರಿಗೂ ಹಾಹಾಕಾರ

ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜನತೆಗೆ ಕುಡಿಯುವ ನೀರು ಜಲಾಶಯವೇ ಆಧಾರ. ಕುಡಿಯುವ ನೀರಿಗಾಗಿ ಸುಮಾರು 15 ಟಿ.ಎಂ.ಸಿ. ನೀರು ಶೇಖರಿಸಿಡಲಾಗುತ್ತದೆ. ಆದರೆ, ಈಗ ಜಲಾಶಯದಲ್ಲಿ 5 ಟಿಎಂಸಿ ನೀರಿದ್ದು, ಇನ್ನೆರಡು ವಾರಕ್ಕೆ ಮಾತ್ರ ನೀರಿದೆ. ಕಳೆದ ವರ್ಷ ಈ ಹೊತ್ತಿಗೆ ಸಾವಿರಾರು ಕ್ಯುಸೆಕ್‌ ನೀರು ಜಲಾಶಯ ಕೈ ಹರಿದು ಬರುತ್ತಿತ್ತು. ಈ ಬಾರಿ 341 ಕ್ಯೂಸೆಕ್ ನೀರು ಬರುತ್ತಿದೆ. ಕೆಲ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗುತ್ತಿದ್ದು, ಇನ್ನೆರಡು ವಾರವಾದರೆ, ಶೇ. 50 ರಷ್ಟು ಹಳ್ಳಿಗಳಿಗೆ ಟ್ಯಾಂಕರ್ ನೀರೇ ಗತಿ ಎಂಬ ಪರಿಸ್ಥಿತಿ ಉದ್ಭವವಾಗಿದೆ.

ಕಾರ್ಖಾನೆಗಳಿಗೆ ನೀರು ಸಾಗಣೆ

ಜಲಾಶಯದಲ್ಲಿ ನಿರೀಕ್ಷಿತ ಮಟ್ಟದಂತೆ ನೀರು ಇಲ್ಲ. ಇಂತಹ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದ ಸುತ್ತಲಿನ ಕಾರ್ಖಾನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಮೀಸಲಿಟ್ಟ ನೀರು ಕಾರ್ಖಾನೆ ಪಾಲಾಗುತ್ತಿದೆ. ಈ ಬಗ್ಗೆ ಹೊಸದಿಗಂತದಲ್ಲಿ ವಿಶೇಷ ವರದಿ ಪ್ರಕಟವಾದರೂ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ. ಜನರ ಹಿತಕ್ಕಿಂತ ಕಾರ್ಖಾನೆಗಳ ಹಿತಾಸಕ್ತಿಗೆ ಅಧಿಕಾರಿಗಳಿಗೆ ಮುಖ್ಯವಾದಂತಿದೆ. ಈ ಬಗ್ಗೆ ಜನರು ಕೂಡ ಆಕ್ರೋಶ ಹೊರ ಹಾಕಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!