– ಪವಮಾನ ಐರಣಿ
ದಾವಣಗೆರೆ: ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿನದಿಂದದಿನಕ್ಕೆ ಉಚಿತವಾಗಿ ಓಡಾಡುವ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದರ ಪರಿಣಾಮ ಖಾಸಗಿ ಬಸ್, ಆಟೋಗಳ ದುಡಿಮೆ ಕಡಿಮೆಯಾಗುತ್ತಿದ್ದು, ಇದನ್ನೇ ಅವಲಂಬಿಸಿರುವ ಸಾವಿರಾರು ಮಂದಿ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚುನಾವಣೆಗೂ ಮುನ್ನ ಘೋಷಿಸಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಿಂಗಳೊಳಗೆ ಜಾರಿಗೊ ಳಿಸಿದೆ. ಸಾಮಾನ್ಯ, ವೇಗದೂತ, ನಗರ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಇರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಗಳತ್ತ ಮುಖ ಮಾಡಿದ್ದಾರೆ. ಕುಟುಂಬದ ಹೆಣ್ಣುಮಕ್ಕಳೊಂದಿಗೆ ಪುರುಷರೂ ಜೊತೆಗೆ ಹೋಗುತ್ತಿದ್ದಾರೆ. ಹೀಗಾಗಿ, ಖಾಸಗಿ ಬಸ್ಗಳ ಆದಾಯದ ಮೇಲೆ ಭಾರಿ ಹೊಡೆತ ಬಿದ್ದಿದೆ. ಬಹುತೇಕ ಖಾಸಗಿ ಬಸ್ಗಳಲ್ಲಿ ಕೆಲವೇ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಸರ್ಕಾರಿ ಬಸ್ ಸಂಚರಿಸದ, ನಿಲುಗಡೆ ಕೊಡದ ಅಥವಾ ಕಡಿಮೆ ಟ್ರಿಪ್ ಇರುವ ಮಾರ್ಗಗಳ ಖಾಸಗಿ ಬಸ್ಗಳಲ್ಲಿ ಮಾತ್ರ ಮಹಿಳೆಯರು ಪ್ರಯಾಣಿಸುವುದು ಕಂಡುಬರುತ್ತಿದೆ.
ಪರ್ಯಾಯ ವ್ಯವಸ್ಥೆಗೆ ಆಗ್ರಹ:
ನಗರ ಸಾರಿಗೆ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವುದರಿಂದ ನಗರ ಸಾರಿಗೆಯ ಖಾಸಗಿ ಬಸ್ ಮೇಲೂ ಕೊಂಚ ಪರಿಣಾಮ ಉಂಟಾಗಿದೆ. ಆಟೋ ರಿಕ್ಷಾದವರಿಗೂ ಸಮಸ್ಯೆಯಾಗಿದ್ದು, ಮೊದಲಿನಷ್ಟು ಬಾಡಿಗೆ ಸಿಗುತ್ತಿಲ್ಲ, ಎಲ್ಲೂ ಕೆಲಸ ಸಿಗದವರು, ವಿದ್ಯಾವಂತ ನಿರುದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಟೋ ಓಡಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇವರೆಲ್ಲರ ಜೀವನ ನಿರ್ವಹಣೆ ಕಷ್ಟವಾಗಲಿದೆ. ಸರ್ಕಾರ ಯಾವುದೇ ಯೋಜನೆ ಜಾರಿಗೆ ತರುವ ಮುನ್ನ ಸಾಧಕ-ಬಾಧಕ ಪರಿಶೀಲಿಸಬೇಕಿತ್ತು. ಈಗಲಾದರೂ ಯೋಜನೆ ಯಿಂದ ಬಾಧಿತರಾಗುವವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಪರೋಕ್ಷವಾಗಿ ಉದ್ಯಮದ ಮೇಲೂ ದುಷ್ಪರಿಣಾಮ:
ನಿತ್ಯ ಮಹಿಳೆಯರಿಂದ ತುಂಬಿರುತ್ತಿದ್ದ ಜಿಲ್ಲಾ ಕೇಂದ್ರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ತೀರ ಕಡಿಮೆಯಾಗಿದೆ. ಬಸ್ಗಳಲ್ಲಿ ಪುರುಷ ಪ್ರಯಾಣಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಕಂಡು ಬರುತ್ತಿದೆ. ಬಹುತೇಕ ಖಾಸಗಿ ಬಸ್ಗಳಲ್ಲಿ ಜನರೇ ಇಲ್ಲ. ಬೆರಳೆಣಿಕೆಯ ಪುರುಷರು ಮಾತ್ರ ಕಂಡುಬರುತ್ತಿದ್ದಾರೆ. ಜನರು ಸಂಚರಿಸದ ಕಾರಣ ಖಾಸಗಿ ಬಸ್ ಗಳು ಖಾಲಿ ಹೊಡೆಯುತ್ತಿದ್ದು, ಕೆಲ ಮಾರ್ಗಗಳ ಬಸ್ ನಿಂತಲ್ಲೇ ನಿಂತಿವೆ. ಇದು ನೇರವಾಗಿ ಬಸ್ ಮಾಲೀಕರಿಗೆ, ಚಾಲಕ ಮತ್ತು ನಿರ್ವಾಹಕರಿಗೆ ಸಮಸ್ಯೆ ಸೃಷ್ಟಿಸಿದ್ದರೆ, ಪರೋಕ್ಷವಾಗಿ ಆಟೋಮೊಬೈಲ್, ಗ್ಯಾರೇಜ್ ಉದ್ಯಮದ ಮೇಲೂ ದುಷ್ಪರಿಣಾಮ ಬೀರಿದೆ.