ಐದು ತಿಂಗಳ ಹಿಂದೆಯೇ ಶಂಕುಸ್ಥಾಪನೆ, ಗಣೇಶಪಾಲ್ ಹೊಳೆ ಸೇತುವೆ ರೆಡಿಯಾಗೋದು ಯಾವಾಗ?

– ಪ್ರವೀಣ ಹೆಗಡೆ, ಕೊಂಬೇಮನೆ

ಶಿರಸಿ: ಬಹು ವರ್ಷಗಳ ಬೇಡಿಕೆಯಾದ ತಾಲೂಕಿನ ಜಡ್ಡಿಗದ್ದೆ ಸಮೀಪದ ಗಣೇಶಪಾಲ್ ಹೊಳೆಗೆ ಸೇತುವೆ ನಿರ್ಮಿಸಲು ಕಳೆದ ಐದು ತಿಂಗಳ ಹಿಂದೆಯೇ ಶಂಕುಸ್ಥಾಪನೆಯಾದರೂ ಈವರೆಗೆ ಅಡಿಪಾಯವೂ ಬಿದ್ದಿಲ್ಲ. ಇದರಿಂದ ನಿಗದಿತ ಸಮಯಕ್ಕಂತೂ ಸೇತುವೆಯ ಭಾಗ್ಯ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.

ಶಿರಸಿ ಹಾಗೂ ಯಲ್ಲಾಪುರ ರಡೂ ತಾಲೂಕುಗಳ ಜನರಿಗೆ ತೀರ ಅಗತ್ಯವಾದ ಈ ಸೇತುವೆ ಕನಸು ದಶಕಕ್ಕೂ ಹಿಂದಿನದ್ದು. ಆದರೆ ಗ್ರಾಮೀಣ ಭಾಗದ ಜನರ ಈ ಬೇಡಿಕೆ ಈಡೇರಿಕೆ ಮಾತ್ರ ವಿಳಂಬವಾಗಿಯೇ ಸಾಗಿತ್ತು. ಅಂತೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಗಣೇಶಪಾಲ್ ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರಿಯಾಗಿತ್ತು. ಕಳೆದ ಡಿಸೆಂಬರ್ ಮಧ್ಯಭಾಗದಲ್ಲಿ ಶಂಕುಸ್ಥಾಪನೆ ಸಹ ನೆರವೇರಿತ್ತು. ಆದರೆ ಐದು ತಿಂಗಳು ಕಳೆದರೂ ಇನ್ನೂ ಪಿಲ್ಲರ್ ಅಡಿಪಾಯ ಶುರುವಾಗಿಲ್ಲ. ಇನ್ನು ಮಳೆಗಾಲ ಆರಂಭವಾಗುವುದರಿಂದ ಇನ್ಯಾವಾಗ ಕಾಮಗಾರಿ ಆರಂಭವಾಗುವುದೋ? ಸೇತುವೆ ಭಾಗ್ಯ ಯಾವಾಗ ಸಿಗುವುದೋ? ಎಂದು ಜನ ಪ್ರಶ್ನಿಸುವಂತಾಗಿದೆ.

ಶಿರಸಿ ತಾಲೂಕಿನ ಕೊಡ್ನಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿ ಹಾಗೂ ಯಲ್ಲಾಪುರ ತಾಲೂಕಿನ ಉಮ್ಮಚಗಿ ಸಮಿಪದ ಹಿತ್ಲಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಡುವಿನಲ್ಲಿ ಇರುವ ವಿಸ್ತಾರವಾದ ಈ ಹೊಳೆಗೆ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಜನ ಬೇಡಿಕೆ ಇಡುತ್ತ ಬಂದಿದ್ದರು. ಇಲ್ಲಿ ಸೇತುವೆ ನಿರ್ಮಾಣವಾದರೆ ಶಿರಸಿ ತಾಲೂಕಿನ ಮೆಣಸಿ ಸೀಮೆ ಹಾಗೂ ಯಲ್ಲಾಪುರ ತಾಲೂಕಿನ ಭರತನಹಳ್ಳಿ ಸೀಮೆಯ ಜನರಿಗೆ ಪರಸ್ಪರ ಸಮೀಪದ ಮಾರ್ಗವಾಗಲಿದೆ. ಜಡ್ಡಿಗದ್ದೆ ಸಮೀಪದ ಶಿವಗಂಗಾ ಫಾಲ್ಸ್ಗೆ ಬರುವ ಪ್ರವಾಸಿಗರಿಗೆ ಹಾಗೂ ಈ ಭಾಗದ ರೈತರು ಯಲ್ಲಾಪುರ ಭಾಗದ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ಕೊಂಡೊಯ್ಯಲು ಅನುಕೂಲವಾಗಲಿದೆ. ಇಲ್ಲದಿದ್ದರೆ ಜಡ್ಡಿಗದ್ದೆ, ವಾನಳ್ಳಿ ಹಾಗು ಹುಲೆಕಲ್ ಭಾಗದವರು ಯಲ್ಲಾಪುರ ಕಡೆಗೆ ಹಾಗು ಹಿತ್ಲಳ್ಳಿ, ಉಮ್ಮಚ್ಚಗಿ, ಮಾವಿನಕಟ್ಟಾ ಮುಂತಾದ ಭಾಗದವರು ವಾನಳ್ಳಿ ಭಾಗಕ್ಕೆ ತೆರಳಲು ಸೊಂದಾ ಕ್ರಾಸ್ ಮೂಲಕ ಸುತ್ತು ಬಳಸಿ ತೆರಳಬೇಕಾದ ಸ್ಥಿತಿಯಿದೆ. ಸೇತುವೆ ನಿರ್ಮಾಣವಾದರೆ ಅರ್ಧದಷ್ಟು ಸುತ್ತಾಟ ಕಡಿಮೆಯಾಗಲಿದೆ.

ಡಿ.16ಕ್ಕೆ ಆಗಿದ್ದ ಶಂಕುಸ್ಥಾಪನೆ:
ಕಳೆದ 2022ರ ಡಿಸೆಂಬರ್ ತಿಂಗಳ 16ನೇ ತಾರೀಕಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನಡೆದಿದೆ. ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಜಂಟಿಯಾಗಿ ಭೂಮಿಪೂಜೆ ನೆರವೇರಿಸಿದ್ದರು. ನಂತರ ಕಾಮಗಾರಿಗೆ ಒಂದಷ್ಟು ಸಾಮಗ್ರಿ ಶೇಖರಣೆ ಮಾಡಲಾಗಿದೆ. ಹೊಳೆಯ ಮಧ್ಯೆ ರಸ್ತೆ ಮತ್ತಿತರ ಕೆಲ ಕೆಲಸಕ್ಕೆ ಕಾಮಗಾರಿ ಸೀಮಿತವಾಗಿದೆ.

ಏಕೆ ವಿಳಂಬ…?
ಸುಮಾರು 11ಕೋಟಿ ರೂ.ಗೂ ಹೆಚ್ಚಿನ ವೆಚ್ಚದ ಈ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಈವರೆಗೆ ಕಾಮಗಾರಿ ನಡೆಸುವುದಕ್ಕೆ ಹೊಳೆಯ ನಡುವೆ ರಸ್ತೆಗಳನ್ನು ಮಾತ್ರ ಮಾಡಿಕೊಳ್ಳಲಾಗಿದೆ ಸೇತುವೆಯ ಡಿಸೈನ್ಗೆ ಅನುಮತಿ ದೊರೆಯಬೇಕಿದೆ ಎಂದು ಗುತ್ತಿಗೆದಾರರ ಮೂಲಗಳು ಹೇಳುತ್ತವೆ.
ಸೇತುವೆ ನಿರ್ಮಾಣಕ್ಕೆ ಮೊದಲು ಗುರುತಿಸಿದ್ದ ನೀಲನಕ್ಷೆ ಮಾರ್ಗ ತಾಂತ್ರಿಕ ಮತ್ತಿತರ ಕಾರಣದಿಂದ ಸ್ವಲ್ಪ ಬದಲಾವಣೆಯಾಗಿದ್ದು ವಿಳಂಬವಾಗಲು ಕಾರಣವಾಗಿದೆ. ವಿಶಾಲವಾದ ಹೊಳೆಗೆ 400ಪುಟ್ ಉದ್ದ, 24ಪುಟ್ ಅಗಲದ ಈ ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಪಿಲ್ಲರ್ಗಳ ನಿರ್ಮಾಣ ಮಾಡಬೇಕಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!