ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಆದಿಪುರುಷ್’ ಸಿನಿಮಾ ವಿವಾದ ದೇಶವ್ಯಾಪಿ ಹರಡಿದ್ದು, ಇದೀಗ ಸಿನಿಮಾ ನಿಷೇಧಿಸಬೇಕು ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಛತ್ತೀಸಗಢದ ದುರ್ಗ್ ನಗರದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ರಾಜಧಾನಿ ರಾಯ್ಪುರಕ್ಕೆ ಆಗಮಿಸಿದ ಅಮಿತ್ ಶಾ ಅವರಿಗೆ ಸಿನಿಮಾ ನಿಷೇಧ ಸಂಬಂಧ ಭೂಪೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಘೇಲ್, ‘ಶ್ರೀರಾಮನ ಎಲ್ಲ ಆರಾಧಕರು ಮತ್ತು ರಾಜ್ಯದ ಎಲ್ಲ ಜನರು ಅಮಿತ್ ಶಾ ಅವರನ್ನು ಶ್ರೀರಾಮನ ತಾಯಿಯ ತವರಿಗೆ ಸ್ವಾಗತಿಸಿದ್ದಾರೆ. ರಾಮಾಯಣದ ಘನತೆ ಹಾಗೂ ದೇವರುಗಳ ಹೆಸರು ಕೆಡಿಸುತ್ತಿರುವ ‘ಆದಿಪುರುಷ್’ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಇದೇ ವೇಳೆ ವಿನಮ್ರವಾಗಿ ಮನವಿ ಮಾಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.