ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಲೋಕತಂತ್ರಕ್ಕೆ- ಪ್ರಜಾಪ್ರಭುತ್ವಕ್ಕೆ ಬಲ ಕೊಟ್ಟವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿಶ್ಲೇಷಿಸಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಪಕ್ಷ ನಾಯಕರು ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಅವರ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಕಾರಣಕ್ಕಾಗಿಯೇ ಎಲ್ಲ ವಿಪಕ್ಷ ನಾಯಕರು ಲೋಕತಂತ್ರ ಅಪಾಯದಲ್ಲಿದೆ ಎಂದು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ವಂಶಪಾರಂಪರ್ಯ ರಾಜಕಾರಣ ಮಾಡುವವರು ಆತಂಕಕ್ಕೆ ಒಳಗಾಗಿದ್ದಾರೆ. ಅವರು ದುರ್ಬಲರಾಗುತ್ತಿದ್ದಾರೆ. ಇದು ಬಿಜೆಪಿಯ ಜನಪರ ಸ್ಕೀಂ ವರ್ಸಸ್ ಸ್ಕ್ಯಾಮ್ (ಹಗರಣ) ನಡುವಿನ ಆಡಳಿತ. ಜನಪರ ಸ್ಕೀಂಗಳನ್ನು ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಪ್ರತಿನಿಧಿಸುತ್ತದೆ. ಯುಪಿಎ ಸರಕಾರ, ಕಾಂಗ್ರೆಸ್ ಬೆಂಬಲಿತ ಸರಕಾರವು ಸ್ಕ್ಯಾಮ್ ಅನ್ನು (ಹಗರಣ) ಪ್ರತಿನಿಧಿಸುತ್ತದೆ ಎಂದು ವಿಶ್ಲೇಷಿಸಿದರು.
ವಂಶಪಾರಂಪರ್ಯವನ್ನು ಪ್ರತಿನಿಧಿಸುವ ಕೆಲಸವನ್ನು ಕಾಂಗ್ರೆಸ್, ಆರ್ಜೆಡಿ, ಎನ್ಸಿಪಿ, ಸಮಾಜವಾದಿ ಪಕ್ಷಗಳು ಮಾಡಿವೆ. ಪ್ರಜಾಪ್ರಭುತ್ವದ ಆಶಯವನ್ನು ಪ್ರತಿನಿಧಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಜಾತಿವಾದವನ್ನು ಕಾಂಗ್ರೆಸ್ ಮತ್ತಿತರ ಪಕ್ಷಗಳು ಪ್ರತಿನಿಧಿಸಿದರೆ, ಬಿಜೆಪಿ ರಾಷ್ಟ್ರವಾದವನ್ನು ಪ್ರತಿನಿಧಿಸುತ್ತದೆ ಎಂದು ವಿವರಿಸಿದರು.
ಕಳೆದ 9 ವರ್ಷಗಳಲ್ಲಿ ಮೋದಿಜಿ ಆಡಳಿತದಲ್ಲಿ ಸಾಧನೆ ಎಂಬುದು ಅನುಭವವೇದ್ಯವಾಗಿದೆ. ಭಾರತಕ್ಕೆ ಜಾಗತಿಕವಾಗಿ ಮನ್ನಣೆ ಸಿಗುತ್ತಿದೆ. ಭಾರತೀಯರ ಪಾಸ್ಪೋರ್ಟಿಗೆ ಜಗತ್ತಿನಲ್ಲಿ ಗೌರವ ಬಂದಿದೆ ಎಂದು ತಿಳಿಸಿದರು. ಭಾರತದ ಬಡವರಿಗೆ ಬಲ ತುಂಬುವ ಕಾರ್ಯವನ್ನು ಮೋದಿಯವರ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ವಿವರ ನೀಡಿದರು. ಈ ಎಲ್ಲ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ ಎಂದರು.
ಮನೆಮನೆಗೆ ಕರಪತ್ರದ ಮೂಲಕ ಸಾಧನೆಯನ್ನು ತಿಳಿಸುತ್ತೇವೆ. ಬೂತ್ ಕಾರ್ಯಕರ್ತರ ಸಮಾವೇಶವನ್ನೂ ನಡೆಸಲಾಗುತ್ತಿದೆ ಎಂದು ತಿಳಿಸಿದರು.