ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಬೆಳಂಬಾರದ ದಕ್ಷಿಣ ಖಾರ್ವಿವಾಡಾದಲ್ಲಿ ಬಸ್ ತಂಗುದಾಣದ ಸಿಮೆಂಟ್ ಶೀಟುಗಳು ತುಂಡಾಗಿ ಕುಸಿದು ಬಿದ್ದಿದ್ದು ತಂಗುದಾಣದಲ್ಲಿ ಕುಳಿತ ಮಹಿಳೆಯರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ತಂಗುದಾಣದ ಮೇಲ್ಛಾವಣಿಗೆ ಹಾಸಲಾದ ಒಂದು ಸಿಮೆಂಟ್ ಶೀಟು ಬಿದ್ದು ಒಡೆದು ಹೋಗಿದ್ದು ಇನ್ನೊಂದು ಶೀಟು ಮಧ್ಯದಲ್ಲಿ ಒಡೆದು ತುಂಡಾಗಿದೆ. ಬಸ್ ತಂಗುದಾಣ ಇರುವ ಪ್ರದೇಶದ ಸಮೀಪದಲ್ಲೇ ಮೀನುಗಾರಿಕೆ ಜೆಟ್ಟಿ ಇದ್ದು ಅಂಕೋಲಾ ಕಡೆ ತೆರಳುವ ಮೀನುಗಾರ ಮಹಿಳೆಯರು, ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಬಿರು ಬಿಸಿಲು ಮತ್ತು ಭಾರೀ ಮಳೆಯ ಸಂದರ್ಭದಲ್ಲಿ ಇಲ್ಲಿ ಆಶ್ರಯ ಪಡೆದು ವಾಹನಗಳಿಗೆ ಕಾಯುವುದು ಸಾಮಾನ್ಯವಾಗಿದ್ದು ಇದೀಗ ಮೇಲ್ಛಾವಣಿಯ ಶೀಟು ಬಿದ್ದ ಕಾರಣ ಒಳಗೆ ಸಂಪೂರ್ಣ ನೀರು ಸೋರಿ ಕುಳಿತುಕೊಳ್ಳುವುದು ಅಸಾಧ್ಯವಾಗಿದೆ.
ಕಡಲ ತೀರದ ಪ್ರದೇಶ ಆಗಿರುವುದರಿಂದ ಸಮುದ್ರದಿಂದ ಬೀಸುವ ಬಿರುಗಾಳಿಯ ಹೊಡೆತಕ್ಕೆ ಕೆಲವೊಮ್ಮೆ ಎಂಥಾ ಶೀಟುಗಳ ಮೇಲ್ಛಾವಣಿ ಇದ್ದರೂ ಕಿತ್ತು ಹಾರಿ ಹೋಗುತ್ತವೆ ಇಲ್ಲಿ ಕಾಂಕ್ರೀಟ್ ಮೇಲ್ಛಾವಣಿ ಇರುವ ಸುಸಜ್ಜಿತ ಬಸ್ ತಂಗುದಾಣದ ಅಗತ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತು ಸರ್ಕಾರದ ಗಮನ ಸೆಳೆಯುವ ಮೂಲಕ ಅಗತ್ಯ ಕ್ರಮಗಳನ್ನು ಜರುಗಿಸಬೇಕಿದೆ.