ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಇಂದು ಎನ್ಹೆಚ್ ಅಧಿಕಾರಿಗಳ ಜೊತೆ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಹೆದ್ದಾರಿಯ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಡಿಎಲ್ (Driving Licence) ರದ್ದು ಮಾಡುತ್ತೇವೆ. ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಹಾಗೂ ಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಕೇಸ್ (Case) ಹಾಕುವ ಕೆಲಸ ಮಾಡುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ನಾನು ಈ ರಸ್ತೆಯಲ್ಲಿ ಬಹಳ ಬಾರಿ ಸಂಚರಿಸಿದ್ದೇನೆ. ಕಳೆದ ಐದಾರು ತಿಂಗಳಿನಿಂದ ರಾಮನಗರ (Ramanagara) ವ್ಯಾಪ್ತಿಯಲ್ಲಿ 58ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. 48ಕ್ಕೂ ಹೆಚ್ಚು ಅಪಘಾತಗಳಾಗಿವೆ. ಎಲ್ಲೆಲ್ಲಿ ಅಪಘಾತ ನಡೆದಿದೆ ಆ ಸ್ಥಳಗಳ ಸಮಸ್ಯೆ ಬಗ್ಗೆ ಪರಿಶೀಲಿಸಿದ್ದೆವೆ. ಹೆದ್ದಾರಿಯಲ್ಲಿ ಆಗಮನ ಮತ್ತು ನಿರ್ಗಮನದ ಸಮಸ್ಯೆ ಇದೆ. ಕೆಲವೆಡೆ ರಸ್ತೆಯಲ್ಲಿ ತೀವ್ರ ತಿರುವುಗಳಿವೆ. ಇದರಿಂದ ವಾಹನಗಳು ಡಿವೈಡರ್ ಹಾರುತ್ತಿವೆ. ಹೈವೆಯಲ್ಲಿ ಲೇನ್ ಶಿಸ್ತನ್ನು ಬಳಸಬೇಕು. ಹೀಗಾಗಿ ಹೈವೇ ಪಟ್ರೋಲಿಂಗ್ (Patroling) ಅಗತ್ಯ ಇದೆ ಎಂದರು.
ಈಗಾಗಲೇ ನಾಲ್ಕು ಹೈವೇ ಪಟ್ರೊಲಿಂಗ್ ವಾಹನಗಳಲ್ಲಿ ಗಸ್ತು ಮಾಡಲಾಗುತ್ತಿದೆ. ಹೈ ಸ್ಪೀಡ್ ಲಿಮಿಟ್ ತಡೆಗೆ ಸ್ಪೀಡ್ ರೆಡಾರ್ (Speed Radar) ಅಳವಡಿಕೆ ಮಾಡುತ್ತೇವೆ. ಯಾರಾದರೂ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ ಡಿಎಲ್ ರದ್ದು ಮಾಡುತ್ತೇವೆ. ಸದ್ಯ ಕನಿಷ್ಠ 25% ರಷ್ಟು ಅಪಘಾತ ಕಡಿಮೆ ಮಾಡುವ ಗುರಿ ಇದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಸಲಹೆ, ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಅಮೂಲ್ಯವಾದ ಜೀವಕ್ಕಾಗಿ ನಿಧಾನವಾಗಿ ಚಲಿಸಿ. ನಮ್ಮ ಕುಟುಂಬಕ್ಕೆ ನಾವುಗಳೇ ಮುಖ್ಯ. ಹಾಗಾಗಿ ಸುಗಮ ಸಂಚಾರಕ್ಕೆ ಸೀಟ್ ಬೆಲ್ಟ್, ಇಂಡಿಕೇಟರ್ ಬಳಕೆ, ಸ್ಪೀಡ್ ಲಿಮಿಟ್ನಲ್ಲಿಯೇ ವಾಹನ ಚಲಾಯಿಸಬೇಕು. ದಶಪಥ ಹೆದ್ದಾರಿಯಲ್ಲಿ ಗರಿಷ್ಟ ಮಿತಿ 100 ಕಿ.ಮೀ ಇದೆ. ತಿರುವುಗಳಲ್ಲಿ 60- 80 ವೇಗ ಮಿತಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.