ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಎಸಿ ಕಚೇರಿಯ ಗ್ರೇಡ್- 2 ತಹಶೀಲ್ದಾರ್ ಅಶೋಕ್ ಮಣ್ಣಿಕೇರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಈ ಹಿಂದೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲ ಬಾರಿಗೆ ಶಾಸಕರಾಗಿದ್ದಾಗ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದ ಅಶೋಕ್ ಸಾವಿನ ಹಿಂದೆ ಇದೀಗ ಹಲವು ಅನುಮಾನಗಳು ವ್ಯಕ್ತವಾಗಿವೆ.
ಅಶೋಕ್ ಮಣ್ಣಿಕೇರಿ(Ashok mannikeri) ಪತ್ನಿ ಭೂಮಿ ಮತ್ತು ಆಕೆಯ ಸಹೋದರ ಸ್ಯಾಮ್ಯುಯೆಲ್ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಮೃತ ಅಶೋಕ್ ಕುಟುಂಬಸ್ಥರು ಈ ಬಗ್ಗೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಅಶೋಕ್ ಮಣ್ಣಿಕೇರಿ ಕುಟುಂಬ ಬೆಳಗಾವಿಯ ಕಾಳಿ ಅಂಬ್ರಾಯದಲ್ಲಿ ಅಪಾರ್ಟ್ಮೆಂಟ್ನಲ್ಲಿ ವಾಸವಿತ್ತು, ತಡರಾತ್ರಿ ಹೃದಯಾಘಾತವಾಗಿದೆ ಎಂದು ಅಶೋಕ್ ಮಣ್ಣಿಕೇರಿ ಅವರನ್ನು ಪತ್ನಿ ಭೂಮಿ ಹಾಗೂ ಆಕೆಯ ಸಹೋದರ ಸ್ಯಾಮ್ಯುಯೆಲ್ ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದ್ರೆ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಅಶೋಕ್ ಮಣ್ಣಿಕೇರಿ ಕೊನೆಯುಸಿರೆಳೆದಿದ್ದಾರೆ.