ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಬೆಲೇಕೇರಿ ಬಳಿ ಪಾಂಡವಾಪುರ ಹಳ್ಳದ ಸೇತುವೆ ಕೆಳಗೆ ಭಾರೀ ಗಾತ್ರದ ಕಾಡು ಕೋಣ ಮೃತ ಸ್ಥಿತಿಯಲ್ಲಿ ಕಂಡು ಬಂದಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತ ಕಾಡುಕೋಣದ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
ಸೇತುವೆ ಕೆಳಗೆ ಹಳ್ಳದ ನೀರಿನಲ್ಲಿ ಬಿದ್ದಿರುವ ಕಾಡು ಕೋಣ ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ರಾತ್ರಿ ಸಮಯದಲ್ಲಿ ಸ್ಥಳೀಯ ಜನರ ಸಹಕಾರದಿಂದ ಕ್ರೇನ್ ಬಳಸಿ ಮೃತ ಕಾಡುಕೋಣದ ಕಳೆಬರ ಮೇಲೆತ್ತಲಾಗಿದೆ.
ಹಟ್ಟಿಕೇರಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡು ಕೋಣಗಳು ಇರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು ಚಿರತೆಯಂತ ಪ್ರಾಣಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ನೀರಿನಲ್ಲಿ ಬಿದ್ದಿರಬಹುದು ಅಥವಾ ನೀರಿನ ಸೆಳೆತಕ್ಕೆ ಸಿಲುಕಿ ಮೃತ ಪಟ್ಟಿರಬಹುದು ಎಂದು ಅಂದಾಜಿಸಿದ್ದಾರೆ.
ಮೃತ ಕಾಡುಕೋಣದ ಕುತ್ತಿಗೆ ಬಳಿ ಗಾಯದ ಗುರುತಿನಂತೆ ಕಂಡು ಬರುತ್ತಿದ್ದು ಯಾರಾದರೂ ಬೇಟೆಯಾಡಲು ಯತ್ನ ನಡೆಸಿದ್ದರೇ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಗಣಪತಿ ನಾಯಕ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.