ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಮತ್ತೊಂದು ಸಂಚಲನ ಸುದ್ದಿ ಹೊರಬಿದ್ದಿದೆ. ಶರದ್ ಪವಾರ್ ವಿರುದ್ಧ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಪ್ರಮುಖ ನಾಯಕ ಅಜಿತ್ ಪವಾರ್ ಬಂಡಾಯ ಎದ್ದಿದ್ದು, ತಮ್ಮ ಪಕ್ಷದ ನಾಯಕರೊಂದಿಗೆ ಮಹಾರಾಷ್ಟ್ರ ಸಂಪುಟ ಸೇರಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಹಿರಿಯ ನಾಯಕ ಅಜಿತ್ ಪವಾರ್ ಭಾನುವಾರ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿಕೊಂಡು ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿ-ಶಿವಸೇನೆ ಶಿಂಧೆ ಬಣ ಅಜಿತ್ ಪವಾರ್ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ. ಕೆಲವು ದಿನಗಳ ಹಿಂದೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂದು ಈಗಾಗಲೇ ತಿಳಿದಿದೆ. ಪಕ್ಷದ ಕಾರ್ಯಾಧ್ಯಕ್ಷರಾಗಿ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ನೇಮಿಸುತ್ತಿದ್ದಂತೆ, ಆ ಪಕ್ಷದಲ್ಲಿ ಅಜಿತ್ ಪವಾರ್ ಪ್ರಾಮುಖ್ಯತೆ ಕಳೆದುಕೊಂಡರು.
ಅಜಿತ್ ಪವಾರ್ ವರ್ತನೆಯಿಂದ ಶರದ್ ಪವಾರ್ ಅವರನ್ನು ಸೈಡ್ ಮಾಡಿದ್ದಾರೆ ಎಂದು ಸುದ್ದಿಯಾಗಿತ್ತು. ಅಂತಿಮವಾಗಿ ಅಜಿತ್ ಪವಾರ್, ಬಿಜೆಪಿ-ಶಿವಸೇನೆ ಶಿಂಧೆ ಬಣದೊಂದಿಗೆ ಕೈಜೋಡಿಸಿದ್ದು, ಅಜಿತ್ ಜತೆಗೆ ಒಂಬತ್ತು ಮಂದಿ ಸಂಪುಟ ಸೇರುವ ಸಾಧ್ಯತೆ ಇದೆ.
ಅಜಿತ್ ಪವಾರ್ ರಾಜಭವನಕ್ಕೆ ತೆರಳಿದ್ದು, ಅದಕ್ಕೂ ಮುನ್ನ ಹಲವು ಶಾಸಕರ ಜತೆ ಸಭೆ ನಡೆಸಿದ್ದರು. ಎನ್ಸಿಪಿಯ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.