ಹೊಸದಿಗಂತ ವರದಿ ಚಾಮರಾಜನಗರ:
ಆಷಾಡಮಾಸದಲ್ಲಿ ವಿಶೇಷವಾಗಿ ನಡೆಯುವ ಶ್ರೀಚಾಮರಾಜೇಶ್ವರ ರಥೋತ್ಸವ ಸೋಮವಾರ ಅಪಾರ ಜನಸ್ತೋಮದೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ಕೆಂಪನಂಜಮ್ಮ ಸಮೇತ ಶ್ರೀಚಾಮರಾಜೇಶ್ವರಸ್ವಾಮಿಗೆ ವಿಶೇಷಪೂಜೆ, ಬಿಲ್ವಾರ್ಚನೆ ಮಹಾಮಂಗಳಾರತಿದೊಂದಿಗೆ ಗಣೇಶ,ಸುಬ್ರಹ್ಮಣ್ಯ ಜಯಚಾಮರಾಜೇಂದ್ರ ಒಡೆಯರ್ ಉತ್ಸವ ಮೂರ್ತಿಗಳೊಂದಿಗೆ ದೇವಸ್ಥಾನ ಪ್ರದರ್ಶಣೆ ಸಾಗಿ ಮಧ್ಯಾಹ್ನ12 ಗಂಟೆಗೆ ಸರ್ವ ಅಲಂಕೃತ ಬ್ರಹ್ಮರಥ ಮೇಲೆ ಕೂರಿಸಲಾಯಿತು. ಪೂಜೆ, ಕೈಂಕಾರ್ಯಗಳು ನಡೆದು ಈಡುಗಾಯಿ ಒಡೆಯುವ ಮೂಲಕ ಸುಮಾರು12:40 ಕ್ಕೆ ರಥೋತ್ಸವ ಚಾಲನೆ ದೊರೆಯಿತು.
ನವ ಜೋಡಿಗಳ ಕಲರವ: ಶ್ರೀಚಾಮರಾಜೇಶ್ವರ ಸ್ವಾಮಿಯ ಜಾತ್ರೆಯಲ್ಲಿ ವಿಶೇಷ ಎಂದರೆ ಆ಼ಷಾಢ ಮಾಸದಲ್ಲಿ ಬೇರೆಯಾಗುವ ನೂತನ ದಂಪತಿಗಳು ಇಂದು ನಡೆಯುವ ರಥೋತ್ಸವಕ್ಕೆ ಆಗಮಿಸಿ ಹಣ್ಣು- ದವನ ಎಸೆದು ತಮ್ಮ ಇಷ್ಟಾರ್ಥ ಸಿದ್ದಿ ಪಾರ್ಥಿಸಿಕೊಳ್ಳುವುದು ವಾಡಿಕೆ.ಹೀಗಾಗಿ ರಥೋತ್ಸವ ನೂತನ ದಂಪತಿಗಳು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿದ್ದು ರಥೋತ್ಸವ ಹೆಚ್ಚಿನ ಮೆರಗು ತಂದಿತು.
ರಥೋತ್ಸವ ರಥಬೀದಿ, ಮಹಾವೀರ ವೃತ್ತ, ವೀರಭದ್ರೇಶ್ವರ ದೇವಸ್ಥಾನ, ಶ್ರೀಮಾರಮ್ಮ ಗುಡಿಬೀದಿ, ತರಕಾರಿ ಮಾರುಕಟ್ಟೆ, ಮಾರ್ಗವಾಗಿ ಸಾಯಂಕಾಲ ಸ್ವಸ್ಥಾನಕ್ಕೆ ತಲುಪಿತು.