ರೇಣುಕಾ ತಳವಾರ
ಹುಬ್ಬಳ್ಳಿ: ಪ್ರಾಚೀನ ಕಾಲದಲ್ಲಿ ಜೀವನಕ್ಕೆ ಅತೀ ಅವಶ್ಯಕವಾಗಿದ್ದ ಒಳಕಲ್ಲು, ಬೀಸುವ ಕಲ್ಲು ಹಾಗೂ ರೊಟ್ಟಿ ಕಲ್ಲುಗಳನ್ನು ಇಂದು ಕೇಳುವವರೇ ಇಲ್ಲದಂತಾಗಿದೆ. ಆಗೊಮ್ಮೆ ಈಗೊಮ್ಮೆ ಒಳಕಲ್ಲು ಖರೀದಿಸಲು ಗ್ರಾಹಕರು ಬರುತ್ತಾರೆ. ಇದರಿಂದಾಗಿ ಭೋವಿ (ವಡ್ಡರ) ಸಮುದಾಯದ ಕುಲಕಸುಬು ಈಗ ಅವನತಿಯ ಅಂಚಿನಲ್ಲಿದೆ.
ಹುಬ್ಬಳ್ಳಿಯ ಹೊಸುರು ಕ್ರಾಸ್ನಲ್ಲಿ ಸಣ್ಣ ಸಣ್ಣ ಜೋಪಡಿ ಹಾಕಿಕೊಂಡು ಸಾವಿತ್ರಿ ಮಂಜುನಾಥ ಅವರು ತಮ್ಮ ಕಂದಮ್ಮಗಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇದೇ ರೀತಿ ಹಲವಾರು ಕುಟುಂಬಗಳು ಭೋವಿ ಸಮಾಜದ ಮೂಲ ವೃತ್ತಿಯನ್ನೇ ನಂಬಿಕೊಂಡಿದ್ದಾರೆ.
ಈಗ ಬೀಸುವ ಕಲ್ಲಿಗೆ ಬೆಲೆ ಇಲ್ಲದಂತಾಗಿದೆ. ಎಲ್ಲಿ ನೋಡಿದರೂ ಮಿಕ್ಸರ್,- ಗ್ರೈಂಡರ್ ಉಪಯೋಗವೆ ಹೆಚ್ಚು. ಮೊದಲೆಲ್ಲ ಹಳ್ಳಿಗಳಲ್ಲಿ ಬೀಸುವ ಕಲ್ಲಿನಿಂದ ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಬೇಳೆ ಮತ್ತು ದನ-ಕರುಗಳಿಗೆ ಮೆಕ್ಕೆಜೋಳದ ನುಚ್ಚುಗಳನ್ನು ಈ ಬೀಸುವ ಕಲ್ಲಿನಲ್ಲಿ ಒಡೆಯುತ್ತಿದ್ದರು. ಆದರೆ ಈಗ ಎಲ್ಲದಕ್ಕೂ ವಿದ್ಯುತ್ ಚಾಲಿತ ಹಿಟ್ಟಿನ ಗಿರಣಿ ಬಂದಿದೆ. ಇದರಿಂದ ಬೀಸುವ ಕಲ್ಲಿಗೆ ಬೆಲೆ ಕಡಿಮೆಯಾಗಿದೆ.
ಕರ್ನಾಟಕ ಮಾತ್ರವಲ್ಲದೇ ಬೇರೆ ರಾಜ್ಯದಿಂದ ಒಳಕಲ್ಲು ತಂದು ಅದನ್ನು ಇಲ್ಲಿ ಮಾರುತ್ತೇವೆ. ಆದರೆ ಗ್ರಾಹಕರು ಮದುವೆ ಸಮಾರಂಭದಲ್ಲಿ ಮಾತ್ರ ಈ ರೀತಿಯ ಒಳಕಲ್ಲು ಖರೀದಿಸುತ್ತಾರೆ. ಸರ್ಕಾರದಿಂದ ರೇಷನ್ ಬಿಟ್ಟರೇ ನಮಗೆ ಬೇರೇನು ಗತಿ ಇಲ್ಲ. ಇರುವುದಕ್ಕೆ ಸೂರು ಕೂಡ ಇಲ್ಲ. ಸರ್ಕಾರ ಅಳಿವಿನಂಚಿನಲ್ಲಿರುವ ಭೋವಿ ಸಮಾಜದ ಸಹಾಯಕ್ಕೆ ಮುಂದಾಗಬೇಕಿದೆ. ವರ್ಷವಿಡಿ ದುಡಿದರೂ ಕುಟುಂಬ ಸಾಗಿಸುವುದು ಬಲು ಭಾರ ಎನ್ನುತ್ತಾರೆ ಸಾವಿತ್ರಿ ಮಂಜುನಾಥ ಹೊಸುರು.